ಬೆಂಗಳೂರು,ಜೂನ್.19:”ಜೈ ಕಿಸಾನ್” ಎಂದು ಹೆಮ್ಮೆ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲರು ಇದೀಗ “ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ” ಎನ್ನುವ ರಾಷ್ಟ್ರಕವಿ ಕುವೆಂಪು ವಿರಚಿತ ಪದ್ಯವನ್ನು ಇನ್ನಷ್ಟು ಪ್ರಚುರಪಡಿಸಲು ಮುಂದಾಗಿದ್ದಾರೆ.
ಅಂದ್ಹಾಗೆ ಈ ಹಾಡು ಕರ್ನಾಟಕದಲ್ಲಿ ರೈತಗೀತೆಯೆಂದೇ ಪ್ರಖ್ಯಾತಿ ಹೊಂದಿದ್ದು, ಅನ್ನದಾತನ ಮಹತ್ವವೇನು? ಎನ್ನುವುದನ್ನು ಸಾರಿಸಾರಿ ಹೇಳುತ್ತದೆ.ಅಷ್ಟೇ ಅಲ್ಲ ಕಾರ್ಯಕ್ರಮಗಳಲ್ಲಿ ಈ ಗೀತೆ ಮೊಳಗುತ್ತಿದ್ದಂತೆಯೇ ಎದ್ದುನಿಂತು ಗೌರವವನ್ನೂ ಸೂಚಿಸಲಾಗುತ್ತದೆ.
ಇದೀಗ ಕೃಷಿ ಸಚಿವರು ರೈತರ ಮಹತ್ವವನ್ನು ಸಾರುವ ಈ ಹಾಡನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು,ಅಧಿಕಾರಿಗಳು,ಸಿಬ್ಬಂದಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಸೇರಿದಂತೆ ರೈತರು ತಾವು ಬಳಸುವ ಮೊಬೈಲ್ನ ಕಾಲರ್ ಟೋನ್,ರಿಂಗ್ ಟೋನ್ ಆಗಿ ಬಳಸುವಂತೆ ಚಿಂತನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ “ಹಲೋ” ಬದಲಿಗೆ “ಜೈ ಕಿಸಾನ್” ಬಳಸುವಂತೆ ಸಚಿವರು ನಿರ್ದೇಶಿಸಿದ್ದರು.ಇದೀಗ ರೈತಗೀತೆಯನ್ನು ಕಾಲರ್ ರಿಂಗ್ ಟೋನಾಗಿ ಬಳಸಲು ಯೋಜನೆ ರೂಪಿಸಿರುವುದು ರೈತರ ಬಗ್ಗೆ ಸಚಿವರಿಗಿರುವ ಗೌರವವನ್ನು ವ್ಯಕ್ತಪಡಿಸುತ್ತಿದೆ.
ಸಚಿವ ಬಿ.ಸಿ.ಪಾಟೀಲರು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳನ್ನು ಸುತ್ತಿ ಕೃಷಿಚಟುವಟಿಕೆಗಳನ್ನು ನಿರ್ಬಂಧಮುಕ್ತಗೊಳಿಸಿ ರೈತರಿಗೆ ಅನುವು ಮಾಡಿಕೊಟ್ಟಿರುವುದೇ ಸಾಕ್ಷಿ.ಇದು ರೈತರ ಬಗೆಗಿನ ಪ್ರೀತಿ ಕೃಷಿ ಮೇಲಿನ ಕಾಳಜಿ ತೋರಿತ್ತು.









