ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರವಿ ಕುಮಾರ್(29) ಆಲಿಯಾಸ್ ಸೈಕಲ್ ರವಿ ಗುಂಡೇಟು ತಿಂದು ಬಂಧನಕ್ಕೊಳಗಾಗಿರುವ ರೌಡಿಶೀಟರ್. ಗಾಯಗೊಂಡಿರುವ ಆರೋಪಿಯನ್ನು ಆರ್.ಆರ್.ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಮೂರ್ತಿ ನಗರ, ಸಿದ್ದಾಪುರ,ಬನಶಂಕರಿ ಸೇರಿದಂತೆ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ರವಿ ಮೇಲೆ ವಿವಿಧ ಅಪರಾಧ ಪ್ರಕರಣ ದಾಖಲಾಗಿವೆ.
ಆರೋಪಿಯ ಬಂಧನಕ್ಕೆ ವ್ಯೂಹ ರಚಿಸಿದ ಸಿಸಿಬಿ ಪೊಲೀಸರು ಇಂದು ಮಧ್ಯಾಹ್ನ ಉತ್ತರಹಳ್ಳಿಯ ನೈಸ್ ರಸ್ತೆ ಬಳಿ ರವಿ ಕಾರಿನಲ್ಲಿ ಬರುತ್ತಿರುವ ಮಾಹಿತಿ ಮೇರೆಗೆ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಅನಿರಿಕ್ಷೀತ ದಾಳಿಯಿಂದ ಪೊಲೀಸರನ್ನು ಕಂಡ ಆರೋಪಿ ಪರಾರಿಯಾಗಿದ್ದಾನೆ. ಈತನನ್ನು ಬೆನ್ನಟ್ಟಿದ ಪೊಲೀಸರು ನೈಸ್ ರಸ್ತೆ ಬಳಿ ಆರೋಪಿಯ ಕಾರಿಗೆ ಅಡ್ಡ ಹಾಕಿದ್ದಾರೆ. ಭೀತಿಯಿಂದ ಆರೋಪಿಯು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ಅಪಾಯದಿಂದ ಪಾರಾಗಿದ್ದು,
ಪರಾರಿಯಾಗುತ್ತಿದ್ದ ರೌಡಿಶೀಟರ್ ಗೆ ಶರಣಾಗುವಂತೆ ಸೂಚಿಸಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಆತ್ಮರಕ್ಷಣೆಗಾಗಿ ರಿವಾಲ್ವರ್ ನಿಂದ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.









