ಬೆಂಗಳೂರು: ಟೆಂಡರ್ ಮುಂಗಡ ಪಾವತಿ ವಿಷಯದಲ್ಲಿ ರಾಜ್ಯ ಸರ್ಕಾರ MSME ಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊರೋನಾ ಸೋಂಕು ಹಬ್ಬಿದ ನಂತರ ಲಾಕ್ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. MSME ಗಳು ಕೇಂದ್ರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಮಾತ್ರ ಇಂತಹ ವಿನಾಯಿತಿ ಇಲ್ಲ. ರಾಜ್ಯ ಸರ್ಕಾರ MSME ಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು.
ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚುಮಂದಿ MSME ಉದ್ದಿಮೆದಾರರು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚು ಬೆಂಗಳೂರಿನ ಉದ್ಯಮಿಗಳು. ರಾಜ್ಯ ಸರಕಾರದ ಬಿಡ್ ನಲ್ಲಿ ಭಾಗವಹಿಸಲು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಮುಂಗಡ ಹಣ ಪಾವತಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಬೇಕು.
ರಾಜ್ಯ ಸರ್ಕಾರ ಕೇಂದ್ರದ ರೀತಿ ಸಣ್ಣ,ಮಧ್ಯಮ ಉದ್ದಿಮೆದಾರರಿಗೆ ಸಹಾಯಹಸ್ತ ಚಾಚಿದರೆ ಕಷ್ಟಕ್ಕೆ ಸಿಲುಕಿರುವ MSME ಉದ್ದಿಮೆದಾರರು ತುಸು ಉಸಿರಾಡಲು ಸಾಧ್ಯವಾಗುತ್ತದೆ. ಇವರೊಂದಿಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಉದ್ಯೋಗಸ್ಥರಿದ್ದಾರೆ ರಾಜ್ಯಸರ್ಕಾರ ತಡಮಾಡದೆ ತಕ್ಷಣವೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.









