ಬೆಂಗಳೂರು: ಬೆಂಗಳೂರು-ಮಂಗಳೂರು ಹೈವೆ ಅಗಲೀಕರಣ ವಿಚಾರಕ್ಕೆ ಸಂಬಂಧಿಸಿದಂತೆ
ಸಕಲೇಶಪುರ ನಗರ ರಸ್ತೆಯ ಪಕ್ಕದ 40 ಅಡಿ ಕಟ್ಟಡಗಳ ತೆರವಿಗೆ ನೀಡಿದ್ದ ಎಸಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ರಸ್ತೆ ಅಗಲೀಕರಣ ಸಂಬಂಧ ಎಸಿ ನೀಡಿದ್ದ ಆದೇಶ ಪ್ರಶ್ನಿಸಿ ಹಲವರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ಏಕ ಸದಸ್ಯ ಪೀಠ, ಬೈಪಾಸ್ ರಸ್ತೆಗೆ ಈಗಾಗಲೇ ನಕಾಶೆ ಸಿದ್ದವಾಗಿದ್ದು, ಬೈಪಾಸ್ ಯೋಜನೆ ಪ್ರಗತಿಯಲ್ಲಿರುವಾಗ ಬಿಎಂ ರಸ್ತೆ ಅಗಲೀಕರಣ ಸರಿಯಲ್ಲ ಎಂದು ಎಸಿ ಆದೇಶಕ್ಕೆ ತಡೆ ಕೋರಿದ್ದ ಅರ್ಜಿದಾರರ ಮನವಿ ಪುರಸ್ಕರಿಸಿ ನಗರದ ರಸ್ತೆ ಅಗಲೀಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸಕಲೇಶಪುರ ಎಸಿ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆ ನಿರ್ದೇಶನ ನೀಡಿದ್ದು ಈ ಮೂಲಕ ಎಸಿ ಕಛೇರಿ ಮತ್ತು ಲೋಕೋಪಯೋಗಿ ಇಲಾಖೆಗೆ ಭಾರಿ ಮುಖಭಂಗವಾಗಿದೆ.









