ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾಗಲಿದೆ : ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜಿನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿಂದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಸರ್ಕಾರ ಆದಷ್ಟು ಬೇಗ ಹೋಗುವುದು ಒಳ್ಳೆಯದು ಎಂದರು.
ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಜಗಳವನ್ನು ಮುಚ್ಚಿಕೊಳ್ಳಲು ಅವರು ಈ ರೀತಿ ಸುಳ್ಳಿನ ಮಾತುಗಳನ್ನು ಹೇಳುತ್ತಿದ್ದಾರೆ.

ಜಾರಕಿಹೊಳಿಯವರು ನಮ್ಮ ಪಕ್ಷ ಬಿಟ್ಟು ಹೋದಾಗ ಮಹೇಶ್ ಕುಮುಟಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಜೆಡಿಎಸ್‍ನ ಮೂವರು, ನಮ್ಮ ಪಕ್ಷದ 14 ಮಂದಿ ಆಪರೇಷನ್ ಕಮಲದಿಂದ ಬಿಜೆಪಿಗೆ ಹೋದರು. ಅಧಿಕಾರ ಮತ್ತು ಹಣಕ್ಕಾಗಿ ಅವರು ಪಕ್ಷಾಂತರ ಮಾಡಿದರು.

ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ರಹಸ್ಯ ಸಭೆ ನಡೆಸಿರುವುದನ್ನು ಮುಚ್ಚಿಡಲು ಈ ರೀತಿ ಹೇಳುತ್ತಿದ್ದಾರೆ. ಮಹೇಶ್ ಕುಮಟಳ್ಳಿ ಬಿಟ್ಟರೆ ಮೂರನೆಯವರು ಅವರ ಜೊತೆ ಇರಲಿಲ್ಲ.

ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ. ಯಡಿಯೂರಪ್ಪ ನಮ್ಮ ನಾಯಕರಲ್ಲ. ಅವರ ಬರೇ ಉಖ್ಯಮಂತ್ರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದರಿಂದ ರವಾನೆಯಾಗುವ ಸಂದೇಶ ಏನು ?
ನಾವು ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಹೋದರೆ ನಾವು ಜವಾಬ್ದಾರರಲ್ಲ. ಇಂಥ ಕೆಟ್ಟ ಸರ್ಕಾರ ಎಂದೂ ಬಂದಿರಲಿಲ್ಲ. ಈ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅಧಿಕಾರ ಚಲಾಯಿಸುವ ಮುಖ್ಯಮಂತ್ರಿ ಒಬ್ಬರು, ನಾಮ್‍ಕೇವಾಸ್ಥೆ ಮುಖ್ಯಮಂತ್ರಿ ಇನ್ನೊಬ್ಬರು ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.
ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬುದು ಸುಳ್ಳು. ಕೊಟ್ಟಿದ್ದರೆ ಆದೇಶದ ಪ್ರತಿ ತೋರಿಸಲಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಉಮೇಶ್ ಕತ್ತಿಯವರು ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡಿದರು ಎಂಬುದು ಊಹಾಪೋಹ. ಅವರು ನನ್ನ ಸ್ನೇಹಿತರು. ಅವರು ನನ್ನೊಂದಿಗೆ ಜನತಾ ಪರಿವಾರದಲ್ಲಿದ್ದರು. ನನ್ನ ಮತ್ತು ಅವರ ಮಧ್ಯೆ ಗೆಳೆತನ, ವಿಶ್ವಾಸ ಇದೆ. ಆದರೆ ಅವರು ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ.
ಸಿದ್ದರಾಮಯ್ಯ ಅವರ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರ ಎಂದು ಮೋದಿಯವರು ಹೇಳಿದ್ದರು. ಈಗಿನ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂಬುದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಈ ಸರ್ಕಾರದಲ್ಲಿ ಹಣ ನೀಡಬೇಕು. ಕತ್ತಿಯವರ ಮನೆಯಲ್ಲಿ ಊಟಕ್ಕೆ ಸೇರಿದ್ದ ಶಾಸಕರೇ ಈ ಮಾತು ಹೇಳಿದ್ದಾರೆ ಎಂದರು ಸಿದ್ದರಾಮಯ್ಯ.

ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ಮೋದಿಯವರ ಸಾಧನೆ : ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರದ ಎನ್‍ಡಿಎ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ. ಯುವಕರಿಗೆ, ರೈತರು, ಕಾರ್ಮಿಕರಿಗೆ ಅನ್ಯಾಯ ಮಾಡಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಕೇಂದ್ರದ ಸಾಧನೆ ದೊಡ್ಡ ಸೊನ್ನೆ. ರೈತರು, ಯುವಕರು ಹಾಗೂ ಕಾರ್ಮಿಕರಿಗೆ ಕೇಂದ್ರದಿಂದ ಭಾರಿ ಅನ್ಯಾಯವಾಗಿದೆ. ವೈಫಲ್ಯಗಳನ್ನು ಹೇಳುತ್ತಾ ಹೋದರೆ ಗಂಟೆಗಟ್ಟಲೆ ಸಮಯವಾಗುತ್ತದೆ. ರೈತ, ಕಾರ್ಮಿಕ, ಜನ ವಿರೋಧಿ ಆಡಳಿತ ವಿರೋಧಿ ಆಡಳಿತ ನೀಡಿರುವುದೇ ಮೋದಿಯವರ ಬಹುದೊಡ್ಡ ಸಾಧನೆ.
ಇದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಭಿಪ್ರಾಯ. ಕೇಂದ್ರ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :

ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ದೇಶದ ಜನತೆ ಮೋದಿಯವರ ಮೇಲೆ ವಿಶ್ವಾಸ ಇಟ್ಟು ಎರಡನೇ ಅವಧಿಗೂ ಅವರಿಗೆ ಪ್ರಧಾನಿಯಾಗುವ ಅವಕಾಶ ಮಾಡಿಕೊಟ್ಟರು.
ಮೊದಲ ಅವಧಿಯಲ್ಲಿ ಮೋದಿಯವರ ಆಡಳಿತ ಎಲ್ಲ ದೃಷ್ಟಿಕೋನದಿಂದಲೂ ಸಂಪೂರ್ಣವಾಗಿ ವೈಫಲ್ಯ ಕಂಡಿತ್ತು. ಜನರಿಗೆ ನೀಡಿದ ಯಾವುದೇ ಭರವಸೆಯನ್ನೂ ಅವರು ಈಡೇರಿಸಲಿಲ್ಲ. ಸುಳ್ಳುಗಳ ಸರಮಾಲೆಯನ್ನೇ ಅವರು ಜನರ ಮುಂದೆ ಪೋಣಿಸಿದ್ದರು. ಆರನೇ ವರ್ಷದಲ್ಲೂ ಅವರ ಸುಳ್ಳುಗಳು ಮುಂದುವರಿದಿದೆ. ಇದೇ ಅವರ ಒಂದು ವರ್ಷದ ಸಾಧನೆ.

ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿಯವರು ದೇಶದ ಜನತೆಗೆ ಪತ್ರ ಬರೆದಿದ್ದು, ತ್ರಿವಳಿ ತಲಾಖ್, ಅಯೋಧ್ಯೆ ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಾರೆ. ರೈತರಿಗೆ ತಿಂಗಳಿಗೆ ಆರು ಸಾವಿರದಂತೆ 72 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎಂದಿದ್ದಾರೆ. ರಾಮಮಂದಿರ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇಂದ್ರ ಸರ್ಕಾರದ ಗೆಲುವು ಅಲ್ಲ. ಅದು ಸರ್ಕಾರದ ಸಾಧನೆ ಏನಲ್ಲ. ಕಾಶ್ಮೀರ, ತ್ರಿವಳಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಾರ್ಯಕಾರಿ ಆದೇಶ ಹೊರಬಿದ್ದಿದೆ. ಇದೂ ದೊಡ್ಡ ಸಾಧನೆ ಏನಲ್ಲ ಎಂಬುದು ನನ್ನ ಅಭಿಪ್ರಾಯ.

ದೇಶದ ಬಡತನ, ನಿರುದ್ಯೋಗ, ರೈತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಪರಿಹಾರ ಏನು ಎಂಬುದರ ಬಗ್ಗೆ ಮೋದಿಯವರು ಪ್ರಸ್ತಾಪ ಮಾಡಿಲ್ಲ. ಕಪ್ಪು ಹಣ ವಾಪಸ್, ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ. ಜಮೆ, ಯುವಕರಿಗೆ ಉದ್ಯೋಗ, ಜಿಡಿಪಿ ಬೆಳವಣಿಗೆ ಬಗ್ಗೆ ಪ್ರಧಾನಿಯವರೇಕೆ ಮಾತನಾಡುವುದಿಲ್ಲ.

ಜಿಡಿಪಿ ಬೆಳವಣಿಗೆ ಹನ್ನೊಂದು ವರ್ಷಗಳಲ್ಲೇ ತೀರಾ ಕೆಳಮಟ್ಟಕ್ಕೆ (4.2) ಹೋಗಿದೆ. ಶ್ರೀಲಂಕಾ, ನೇಪಾಳ ಪಾಕಿಸ್ತಾನ, ಬಾಂಗ್ಲಾ ದೇಶಕ್ಕಿಂತ ಹಿಂದಕ್ಕೆ ಹೋಗಿದ್ದೇವೆ. ನನ್ನ ಪ್ರಕಾರ ಈ ವರ್ಷ ನಕಾರಾತ್ಮಕ ಬೆಳವಣಿಗೆಯಾಗಲಿದೆ. ನಿರುದ್ಯೋಗ ಪ್ರಮಾಣ ಕಳೆದ 50 ವರ್ಷಗಳಲ್ಲಿಯೇ ಈ ಮಟ್ಟದಲ್ಲಿ ಏರಿಕೆಯಾಗಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಏನು ? ಕೈಗಾರಿಕೆ ವಲಯದಲ್ಲಿ ಹೂಡಿಕೆ ಎಷ್ಟಾಗಿದೆ ? ಎಂಬುದರ ಬಗ್ಗೆ ಪ್ರಧಾನಿಯವರು ಅಂಕಿ-ಸಂಖ್ಯೆ ಸಮೇತ ವಿವರಿಸಬೇಕು.

ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯುವುದು ಅವರ ಮಾಡಿರುವ ಸಾಧನೆಯ ಮೇಲೆ ಅಳೆಯಬೇಕೇ ಹೊರತು ಭಾವನಾತ್ಮಕ ವಿಚಾರಗಳನ್ನು ಮುಂದಿಟುಕೊಂಡು ಬೆಂಕಿ ಹಚ್ಚುವುದು ಆ ಮೂಲಕ ನಾಯಕತ್ವ ಅಳೆಯುವುದಲ್ಲ. ಪತ್ರ ಬರೆಯುವ ಬದಲು ಮೋದಿಯವರು ಪತ್ರಿಕಾಗೋಷ್ಠಿ ಕರೆದು ವಿವರಣೆ ನೀಡಬಹುದಲ್ಲ. ಅವರ ದೃಷ್ಟಿಯಲ್ಲಿ ಮಾಧ್ಯಮದವರು ಅಸ್ಪøಶ್ಯರು. ಇದು ತಮಾಷೆಗೆ ಹೇಳುವ ಮಾತಲ್ಲ. ಎಲ್ಲದರ ಬಗ್ಗೆ ವಿವರಣೆ ಕೇಳುತ್ತಾರೆ ಎಂಬ ಕಾರಣಕ್ಕೆ ಅವರು ಮಾಧ್ಯಮ ಪತ್ರಿತಿನಿಧಿಗಳನ್ನು ಭೇಟಿಯಾಗುವುದಿಲ್ಲ.

ಕೃಷಿ ಕ್ಷೇತ್ರ ಸ್ಥಿರವಾಗಿದೆ ಎಂದು ಮೋದಿಯವರು ಹೇಳುತ್ತಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ತೊಗರಿಯನ್ನೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಆಗಲಿಲ್ಲ. ರೈತರಿಗೆ ವರ್ಷಕ್ಕೆ ಆರು ಸಾವಿರ ಕೊಟ್ಟಿದ್ದೇವೆ ಎನ್ನುತ್ತಾರೆ. ತಿಂಗಳಿಗೆ 500 ರೂ. ಸಾಕಾಗುವುದೇ ಅವರಿಗೆ. ಇದು ದೊಡ್ಡ ಸಾಧನೆಯೇ ? ಆದರೂ ರೈತರ ಆತ್ಮಹತ್ಯೆ ನಿಂತಿಲ್ಲವೇಕೆ ? ರೈತರ ಪರವಾಗಿದ್ದರೆ ಅವರಿಗೆ ಮಾರಕವಾಗುವಂತೆ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿದ್ದೇಕೆ ?

ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಕಾರ್ಮಿಕ ವಿರೋಧಿ ಧೋರಣೆ. ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ಗಾಯದ ಮೇಲೆ ಇದು ಬರೆ ಎಳೆದಂತೆ. ಅನ್ನ, ಆಹಾರ, ಔಷಧ ಇಲ್ಲದೆ ರೈಲು ಪ್ರಯಾಣದ ವೇಳೆ 80 ಕಾರ್ಮಿಕರು ಸಾವಿಗೀಡಾಗಿದ್ದಾರೆ. ಇದಕ್ಕೆ ಹೊಣೆ ಯಾರು ?

ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್. ಜಿಡಿಪಿಯಲ್ಲಿ ಶೇ.1ರಷ್ಟನ್ನೂ ಸರ್ಕಾರ ಕೊರೊನಾಗೆ ಖರ್ಚು ಮಾಡಿಲ್ಲ. ಜೇಬಲ್ಲಿ ದುಡ್ಡಿದ್ದರೆ ಬಿರಿಯಾನಿ ತಿನ್ನುವುದು, ಬಿರಿಯಾಗಿ ತಿಂದರೆ ತಾನೆ ದುಡಿಯಲು ಶ್ರಮಿಕ ವರ್ಗದವರಿಗೆ ಶಕ್ತಿ ಬರುವುದು.

ಅಂತ್ಯೋದಯ ಈಗ ಆರಂಭವಾಗಿದೆ ಎನ್ನುತ್ತಾರೆ. ಇದು ಅಂತ್ಯೋದಯ ಅಲ್ಲ. ವಿನಾಶ. ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಕೊರೊನಾ ಪರೀಕ್ಷೆ ಪ್ರಮಾಣ ದೇಶ ಮತ್ತು ರಾಜ್ಯದಲ್ಲಿ ತೀರಾ ಕಡಿಮೆ ಇದೆ.

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಭಾವನಾತ್ಮಕವಾಗಿ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ದೇಶದಲ್ಲಿ ಸೋಂಕು ಕಂಡು ಬಂದ ಕೂಡಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧಿಸಿದ್ದರೆ, ಟ್ರಂಪ್ ಕಾರ್ಯಕ್ರಮ ನಡೆಸದೇ ಹೋಗಿದ್ದರೆ, ತಬ್ಲಿಘ್‍ಗಳ ಸಮಾವೇಶಕ್ಕೆ ಅನುಮತಿ ಕೊಡದೇ ಹೋಗಿದ್ದರೆ ಸೋಂಕು ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ.

ಲಕ್ಷಾಂತರ ವಲಸಿಗ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜವಾಬ್ದಾರಿ ಹೊರುವವರು ಯಾರು ? ಲಾಕ್‍ಡೌನ್ ಜಾರಿಗೆ ತರುವ ಮುನ್ನ ಈ ಎಲ್ಲದರ ಬಗ್ಗೆ ಆಲೋಚಿಸಲಿಲ್ಲವೇ ? ಸಂಘ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕರು ನೊಂದವರ ನೆರವಿಗೆ ನಿಲ್ಲದೇ ಹೋಗಿದ್ದರೆ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಆಗುತ್ತಿತ್ತು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಹತ್ತು ತಿಂಗಳಾಗಿದೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಈ ವರೆಗೆ ಸೂರು ಒದಗಿಸಲಿಲ್ಲ. ಪ್ರವಾಹದಿಂದ ಒಂದು ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದರೂ ಪ್ರಧಾನಿಯವರು ಬಂದು ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಹೇಳುವ ಧೈರ್ಯ ಯಡಿಯೂರಪ್ಪ ಅವರಿಗೆ ಇದೆಯೇ ?

ಕೇಂದ್ರದಿಂದ ಹಣಕಾಸು ನೆರವು ಬರುವ ವಿಚಾರದಲ್ಲಿಯೂ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದರೂ ಯಡಿಯೂರಪ್ಪ ಅವರು ಕೇಳುವ ಸಾಹಸ ಮಾಡಲಿಲ್ಲ. ಬಿಜೆಪಿಯ 25 ಸಂಸದರಿದ್ದರೂ ಧ್ವನಿ ಎತ್ತರಲಿಲ್ಲ. ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳುವುದೇ ?

ಅಂತಾರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ತೀವ್ರವಾಗಿ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿಲ್ಲ. ಗ್ಯಾಸ್ ಸಿಲಿಂಡರ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಿದಕ್ಕೇ ಯುಪಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿಯವರು ಭಾರಿ ಪ್ರತಿಭಟನೆ ನಡೆಸಿದ್ದರು. ರಸ್ತೆಗಳಲ್ಲಿ ಒಲೆ ಹಚ್ಚಿ ವಿರೋಧ ಮಾಡಿದ್ದರು. ಬೀದಿಗಿಳಿಯುವುದು ಬಿಟ್ಟರೆ ಜನರ ಕಷ್ಟ ನಿವಾರಣೆ ಮಾಡುವುದು ಹೇಗೆ ಎಂಬುದೇ ಬಿಜೆಪಿಯವರಿಗೆ ತಿಳಿದಿಲ್ಲ. ಈಗ ಯಡಿಯೂರಪ್ಪ ಅವರು ಸಿಲಿಂಡರ್ ಅನ್ನು ತಲೆಯ ಮೇಲೆ ಹೊತ್ತು ತಿರುಗುವರೇ ಎಂದು‌ ಪ್ರಶ್ನಿಸಿದರು.

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ: ಕುಮಾರಸ್ವಾಮಿ

ಬೆಂಗಳೂರು:ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ ಹೇರುತ್ತಿರುವುದು ಖಂಡನೀಯ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.
ಸೂಕ್ತ ವಸತಿ,ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲು ಕಷ್ಟ. ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಮೌಲ್ಯಮಾಪನಕ್ಕೆ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರೀಕರಣ ವ್ಯವಸ್ಥೆಯಾಗಬೇಕು. ಡಿಡಿಪಿಐ ಗಳು, ಜಿಲ್ಲಾಧಿಕಾರಿಗಳಿಂದ ಮೌಲ್ಯಮಾಪನಕ್ಕೆ ಬರದಿದ್ದರೆ ವೇತನರಹಿತ ರಜೆ ಎಂಬ ‘ಧಮ್ಕಿ’ ಹಾಕಿ ಸುತ್ತಿರುವುದು ಸರ್ಕಾರದ ಅವಿವೇಕದ ಕ್ರಮ, ಪಿಯುಸಿ ಎಕ್ಸಾಮ್ ಮುಗಿಯಲು ಜೂನ್ 18 ರವರೆಗೆ ಕಾಲಾವಕಾಶ ಇದೆ. ಸರ್ಕಾರ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ” ಪ್ರಯೋಗ ಮಾಡಲು ಮುಂದಾಗಿರುವುದನ್ನು ತಕ್ಷಣ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ಗೆ ಬರ್ತ್ ಡೇ ಸಂಭ್ರಮ…ಸಿದ್ದವಾಗುತ್ತಿದೆ ಕನಸುಗಾರನ ಮತ್ತೊಂದು ಕನಸು

ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ ವಿ. ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 59 ವಸಂತಗಳನ್ನು ಪೂರೈಸುತ್ತಿರುವ ರವಿಮಾಮ ಲಾಕ್ ಡೌನ್ ಕಾರಣದಿಂದ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ

ಸಿನಿಮಾವನ್ನೇ ಬದುಕಾಗಿಸಿಕೊಂಡಿರುವ ರವಿಮಾಮನ ಸಿನಿ ಪ್ರಯೋಗ ಪ್ರೇಮಲೋಕದಿಂದ ಆರಂಭಗೊಂಡು ರಣಧೀರ,ಅಂಜದಗಂಡು,ಶಾಂತಿಕ್ರಾಂತಿ,ರಾಮಾಚಾರಿ,ಏಕಾಂಗಿ,ಮಲ್ಲ,ಅಪೂರ್ವ ಹೀಗೆ ಸಾಲು ಸಾಲಾಗಿ ಬೆಳ್ಳಿ ಪರದೆ ಮೇಲೆ ಬಂದಿದ್ದು ಪ್ರಯೋಗ ಇನ್ನೂ ನಡೆಯುತ್ತಲೇ ಇದೆ ಸಿನಿಮಾ ಗೆಲ್ಲಲಿ ಸೋಲಲಿ ತಲೆಕೆಡಿಸಿಕೊಳ್ಳದ ರಣಧೀರ ಅಂದುಕೊಂಡ ರೀತಿ ಚಿತ್ರ ಮಾಡುತ್ತಾರೆ ಅಂದುಕೊಂಡ ರೀತಿ ಚಿತ್ರ ಬರಲಿಲ್ಲ ಎಂದರೆ ಆ ಸಿನಿಮಾ ನಿಲ್ಲಿಸಿಬಿಡುತ್ತಾರೆ ಅದಕ್ಕೆ ಮಂಜಿನ ಹನಿ ಉದಾಹರಣೆ.

ಸದ್ಯ ರವಿ ಬೋಪಣ್ಣ ಚಿತ್ರ ಸಂಪೂರ್ಣ ಮುಕ್ತಾಯಗೊಂಡಿದ್ದು ಇನ್ನೇನು ಬಿಡುಗಡೆಯ ಸನಿಹದಲ್ಲಿದೆ ಇದೊಂದು ರೀತಿಯ ಪತ್ತೇದಾರಿ ಸಿನಿಮಾವಾಗಿದ್ದು ಹೊಸ ಪ್ರಯೋಗ ಮಾಡಿದ್ದಾರೆ ರವಿಚಂದ್ರನ್.ಇನ್ನೂ ರಾಜೇಂದ್ರ ಪೊನ್ನಪ್ಪ ಚಿತ್ರ ಅರ್ಧ ಚಿತ್ರೀಕರಣಗೊಂಡಿದ್ದು ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ ಈ 2 ಚಿತ್ರದಲ್ಲಿ ರವಿಚಂದ್ರನ್ ಬಿಜಿಯಾಗಿದ್ದಾರೆ.

ಕಳೆದ ಬಾರಿ ಮಗಳ ಮದುವೆ ಎನ್ನುವ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ರವಿಮಾಮ ಈ ಬಾರಿ ಕೊರೋನಾ ಕಾರಣದಿಂದ ಅಭಿಮಾನಿಗಳಿಂದ ದೂರವು ಉಳಿದಿದ್ದಾರೆ. ಆದರೂ ಅಭಿಮಾನಿಗಳಿಗಾಗಿ ಹೊಸ ಕನಸು ಕಂಡಿದ್ದಾರೆ ರವಿಚಂದ್ರನ್. ಆ್ಯಫ್ ಮೂಲಕ ಅಭಿಮಾನಿಗಳನ್ನು ತಲುಪಲು ಸಿದ್ಧತೆ ನಡೆಸುತ್ತಿದ್ದಾರೆ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕಕ್ಕೆ ಮುಂದಾಗಿದ್ದಾರೆ.ಈಶ್ವರಿ ಸಂಸ್ಥೆಯ ಹೆಜ್ಜೆಗುರುತುಗಳು ಸೇರಿದಂತೆ ತಮ್ಮ ಸಿನಿ ಬದುಕಿನ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ಇರಲಿದೆ ಇಷ್ಟು ಮಾತ್ರವಲ್ಲದೇ ತಮ್ಮದೇ ಓಟಿಟಿ ಪ್ಲಾಟ್ ಫಾರಂ ಅನ್ನು ಹೊಂದಲು ರವಿಚಂದ್ರನ್ ಚಿಂತಿಸುತ್ತಿದ್ದಾರೆ ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಏನೇ ಆಗಲಿ ಕನ್ನಡ ಚಿತ್ರರಂಗದ ಶೋ ಮ್ಯಾನ್,ಸದಾ ಹೊಸ ಹೊಸ ಪ್ರಯೋಗ ಮಾಡುವ ಕನಸುಗಾರನಿಗೆ ಸುದ್ದಿಲೋಕ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು…

ಕಾಂಗ್ರೇಸ್ಸಿನ 5 ಶಾಸಕರ ರಾಜೀನಾಮೆ ಕೊಡಿಸುತ್ತೇನೆ: ಸಾಹುಕಾರ್ ಹೊಸ ಬಾಂಬ್

ಚಾಮರಾಜನಗರ: ಬಿಜೆಪಿ  ಹೈಕಮಾಂಡ್ ಒಪ್ಪಿದರೇ ಕಾಂಗ್ರೇಸ್ ನ ಐವರು ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಮರಾಜನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕೊಳ್ಳೇಗಾಲದಲ್ಲಿ ನೀರಾವರಿ ಯೋಜನೆ ಪರಿಶೀಲನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ, ನನ್ನ ಸಂಪರ್ಕದಲ್ಲಿ ಕಾಂಗ್ರೇಸ್ ನ 22 ಶಾಸಕರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೇಸ್ ಮುಳುಗುತ್ತಿರುವ ಹಡಗು ಅಲ್ಲಿಗೆ ಹೋಗುತ್ತೇನೆ ಎನ್ನುವವರು ಮೂರ್ಖರು,
ಉಮೇಶ್ ಕತ್ತಿ ಮನೆಯಲ್ಲಿ ಪೂಜೆ ಇತ್ತು ಎರಡು ತಿಂಗಳಿನಿಂದ ದೂರವಿದ್ದವರು ಹೋಗಿದ್ದರು, ಉಮೇಶ್ ಕತ್ತಿ ಮನೆಯಲ್ಲಿ ಯಾವುದೇ ಸಭೆ ನಡೆದಿಲ್ಲ ಬಿಜೆಪಿ ಸರ್ಕಾರ 100% ಸೇಫ್ ಆಗಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಮೂರು ವರ್ಷವೂ  ಪೂರೈಸಿ ಮುಂದಿನ ಐದು ವರ್ಷ ಆಡಳಿತ ನಡೆಸಲಿದೆ. ನಾನು ಯಡಿಯೂರಪ್ಪ ಪರ, ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲಿಯೇ ಆಗಲಿದೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ಹೇಳಿಕೆಗೆ ಹನೂರು ಕಾಂಗ್ರೇಸ್ ಶಾಸಕ ಆರ್.ನರೇಂದ್ರ ತಿರುಗೇಟು ನೀಡಿದ್ದು, ಕಾಂಗ್ರೇಸ್ ಪಕ್ಷ ಸಮುದ್ರವಿದ್ದಂತೆ, ನೂರಾರು ಜನ ಬರ್ತಾರೆ ಹೋಗ್ತಾರೆ, ಕಾಂಗ್ರೆಸ್ ಗೆ ಇತಿಹಾಸವಿದೆ.
ರಮೇಶ್ ಜಾರಕಿ ಹೊಳಿ ಅವರ ಹಿನ್ನಲೆ ನೋಡಲಿ. ಯಾವ ಪಕ್ಷದಲ್ಲಿದ್ದರು, ಯಾವ ಪಕ್ಷದಿಂದ ಬಂದವರು, ಯಾವ ಪಕ್ಷದಿಂದ ಅಧಿಕಾರಕ್ಕೆ ಬಂದರು? ನಮ್ಮವರನ್ನೆಲ್ಲಾ ಕರೆದುಕೊಂಡು ಹೋಗಿ ಪಕ್ಷಾಂತರ ಮಾಡಿ ಬಿಜೆಪಿಯಲ್ಲಿ ಪವರ್  ಫುಲ್ ಆಗಿದ್ದಾರೆ , ಯಾವ ಪಕ್ಷ ಮುಳುಗುತ್ತದೆ, ತೇಲುತ್ತದೆ ಎನ್ನುವುದು ಚುನಾವಣೆ ಬಂದಾಗ ಗೊತ್ತಾಗುತ್ತಾದೆ ಎಂದು ಚಾಲೆಂಜ್ ಮಾಡಿದರು.

ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವುದು ಯಾರ ಕೈಯಲ್ಲಿಯೂ  ಇಲ್ಲ, ಹಲವಾರು ಜನ ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ.  ಹನೂರು ಶಾಸಕ ನರೇಂದ್ರ ಟಾಂಗ್ ನೀಡಿದ್ದಾರೆ.

ಈ ಬಾರಿಯೂ ಅಭಿಮಾನಿಗಳ ಜೊತೆ ಕ್ರೇಜಿಸ್ಟಾರ್ ಹುಟ್ಟುಹಬ್ಬ ಆಚರಣೆ ಇಲ್ಲ

ಬೆಂಗಳೂರು: ಕಳೆದ ಬಾರಿ ಮಗಳ ಮದುವೆ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ಕನಸುಗಾರ ವೀರಸ್ವಾಮಿ ರವಿಚಂದ್ರನ್ ಈ ಬಾರಿ ಕೋವಿಡ್ ಕಾರಣಕ್ಕೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ನನ್ನ ಪ್ರೀತಿಯ ಅಭಿಮಾನಿಗಳಿಗೆ ಈ ನಿಮ್ಮ ಪ್ರೀತಿಯ ಕನಸುಗಾರನ ಕಡೆಯಿಂದ ಒಂದು ಸಂದೇಶ ಈ ವರ್ಷದ ಹುಟ್ಟು ಹಬ್ಬವನ್ನು ನನ್ನ ಕಡೆಯಿಂದ ಆಚರಿಸುತ್ತಿಲ್ಲ.ಕಾರಣ ಕರೋನ ರೋಗದ ಸಂಬಂಧ ಸರಕಾರ ವಿಧಿಸಿದ ಲಾಕ್ ಡೌನ್ ನಿಯಮವನ್ನು ಪಾಲಿಸೋಣ ದೂರದ ಊರಿನಿಂದ ಬರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ತಿಳಿಸುವುದೇನಂದರೆ ಜನನಿಬಿಡ ಪ್ರದೇಶದಲ್ಲಿ ಸ್ವಲ್ಪ ದಿನ ಸೇರದೆ ನಿಮ್ಮ ನಿಮ್ಮ ಮನೆ ಕೆಲಸದ ಸ್ಥಳದಲ್ಲಿ ಅಂತರ ಕಾಯ್ದುಕೊಂಡು ಇರಿ..ನಿಮ್ಮ ಪ್ರೀತಿಯ ಕನಸುಗಾರ ಎಂದು ಸಂದೇಶದ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.