Live: ಸರ್‌ಎಂವಿ ಪ್ರಶಸ್ತಿ ಪ್ರದಾನ ಸಮಾರಂಭದ ನೇರ ಪ್ರಸಾರ…

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆ 12 ಕ್ಕೆ ಸರ್.ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಅದರ ನೇರ ಪ್ರಸಾರ ಸುದ್ದಿಲೋಕದಲ್ಲಿ ವೀಕ್ಷಿಸಿ..

ಎಫ್ಕೆಸಿಸಿಐ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಭಾಗವಹಿಸಲಿದ್ದಾರೆ.

ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಲಾಂಚ್

ಬೆಂಗಳೂರು, ಆಗಸ್ಟ್ 16: ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರಸ್ವತಿಯ ಪಾವಿತ್ರ್ಯತೆಯನ್ನು ಹೊಂದಿ ಪರಮಹಂಸದಂತೆ ಬಹಳ ಎತ್ತರಕ್ಕೆ ಏರಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್ ನ್ನು ಇಂದು ಅವರು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ:ರಾಜ್ ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ ಎಂದ ಅವರು ಮಕ್ಕಳಿಗೆ ತರ್ಕಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.

ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಡಾ: ರಾಜ್ ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ: ರಾಜ್ ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರ, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.

ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ: ರಾಜ್ ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾ ಕಾಲ ಇತ್ತು. ನಟನೆ ಅವರ ವ್ಯಕ್ತಿತ್ವದ ಒಂದು ಸಣ್ಣ ಭಾಗವಷ್ಟೆ. ಆತ್ಮಶುದ್ಧಿ ಇದ್ದಾಗ ಮಾತ್ರ ರಾಜ್ ಕುಮಾರ್ ಅವರಿಗಿದ್ದ ಮುಗ್ಧತೆ ಮತ್ತು ಕುತೂಹಲದ ಸಮ್ಮಿಲನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಡಾ. ರಾಜ್ ಕುಮಾರ್ ಸಿನಿಮಾದ ಸೂಪರ್ ಸ್ಟಾರ್ ಅಷ್ಟೇ ಅಲ್ಲ. ಆಕಾಶದಲ್ಲಿನ ಹೊಳೆಯುವ ನಕ್ಷತ್ರ. ಅವರ ಶಿಕ್ಷಣದ ಕನಸನ್ನು ಈಗ ಅವರ ಕುಟುಂಬದವರು ಸಾಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಪುನೀತ್ ರಾಜ್‍ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು. ‌

ಇತಿಹಾಸ ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ದೇಶದ 75 ನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಈ ದೇಶದ ದೊಡ್ಡ ಇತಿಹಾಸ ಹಾಗೂ ಚರಿತ್ರೆ. ನಮ್ಮ ಮುಂದಿನ ಪೀಳಿಗೆ, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನ ಈ ದೇಶದ ಚರಿತ್ರೆ ಹಾಗೂ ಅದರ ಹಿಂದಿರುವ ನೋವು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ ಒಂದು ವೇದಿಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಇತಿಹಾಸ ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿನ್ನೆಯನ್ನು ದೇಶ ವಿಭಜನೆ ದಿನ ಎಂದು ಹೇಳಿದ್ದಾರೆ. ಆದರೆ ಈ ವರ್ಷ ನಾವೆಲ್ಲರೂ ಯಾವ ನೋವು, ಯಾರಿಂದ ಈ ನೋವು ಅನುಭವಿಸುತ್ತಿದ್ದೇವೆ ಎಂಬುದು ಮುಖ್ಯ. ಆದರೆ ನಮಗೆ ರಾಜಕಾರಣ ಮುಖ್ಯ ಅಲ್ಲ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಮುಖ್ಯ. ನಾವು ಇಂದು 20 ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೇವೆ ಎಂದರು‌.

ಈ ಸಮಯದಲ್ಲಿ ನಾವು ರಾಷ್ಟ್ರಧ್ವಜವನ್ನು ಒಗ್ಗಟ್ಟಾಗಿ ಎತ್ತಿ ಹಿಡಿಯಬೇಕು. ಉದ್ಯೋಗ ಸೃಷ್ಟಿ ಆಗಬೇಕು. ನೆಮ್ಮದಿ ಸಹಬಾಳ್ವೆ ನೆಲೆಸಬೇಕು. ಜಾತ್ಯಾತೀತ ತತ್ವ ಉಳಿಸಿಕೊಂಡು, ಬುದ್ಧ, ಬಸವ, ಅಂಬೇಡ್ಕರ್ ಬೋಧನೆಯಂತೆ, ಗಾಂಧೀಜಿ ಅವರ ಮಾರ್ಗದರ್ಶನ ಗಮನದಲ್ಲಿಟ್ಟುಕೊಂಡು ಈ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದರು.

ನಾವು ರಾಜಕೀಯ ಮಾತನಾಡುವುದಿಲ್ಲ. ನಮ್ಮ ಸಾಧನೆ ಬಗ್ಗೆ ಹೇಳುತ್ತಿಲ್ಲ. ಸದ್ಯದ ಸಂಕಟ ಸ್ಥಿತಿಯನ್ನು ಯಾವ ರೀತಿ ನಿರ್ವಹಣೆ ಮಾಡಿದ್ದೇವೆ, ಮುಂದೆ ಯಾವ ರೀತಿ ಹೋಗಬೇಕು ಎಂದು ತಿಳಿಸಿದ್ದೇನೆ. ಆಕ್ಟೋಬರ್ ತಿಂಗಳಿಂದ ನಮ್ಮ ಕಾರ್ಯಕ್ರಮ ಆರಂಭಿಸವಾಗುತ್ತದೆ. ನಮ್ಮ ನಾಯಕರು ಪ್ರತಿ ಗ್ರಾಮ ಪಂಚಾಯ್ತಿಗೂ ಭೇಟಿ ನೀಡಲಿದ್ದಾರೆ ಎಂದರು.

ನಾನು ಮುಖ್ಯಮಂತ್ರಿ ಭಾಷಣ ಮಾಡಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಯಾವ ರೀತಿ ಮುಂದಕ್ಕೆ ಹೋಗಬೇಕು ಎಂಬ ಬಗ್ಗೆ ಸಂದೇಶ ಕೊಟ್ಟಿದ್ದೇನೆ.
ಇಂತಹ ಪವಿತ್ರವಾದ ದಿನದ ಇತಿಹಾಸ ಗೊತ್ತಿಲ್ಲದವರ ಬಗ್ಗೆ ಮಾತನಾಡುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ರು.

ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಆಗಸ್ಟ್ 15-ನನ್ನ ಸರ್ಕಾರ ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತವಾಗಿರಲಿದೆ. ಸಮಾಜದ ಕೊನೆಯ ಹಂತದವರೆಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ಯತ್ನಿಸಲಾಗುವುದು ಎಂದು 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

“ಅಭಿವೃದ್ಧಿ ಅಂದರೆ ಅಂಕಿ-ಅಂಶಗಳಲ್ಲ. ನಾಡಿನ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿಯ ಬದುಕು ಹಸನಾಗಬೇಕು. ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ಆರೋಗ್ಯ, ಶಿಕ್ಷಣ, ಉದ್ಯೋಗವನ್ನು ಒದಗಿಸುವುದು ನಮ್ಮ ಆದ್ಯತೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರಕ್ಕೆ ಕೇವಲ 20 ತಿಂಗಳ ಅಧಿಕಾರವಧಿ ಇದೆ. ನಮ್ಮ ಗುರಿ ಸಾಧನೆಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳನ್ನು ರೂಪಿಸಲಾಗುವುದು. ಆಡಳಿತದಲ್ಲಿ ಅಭಿವೃದ್ಧಿ ಜನರ ಸುತ್ತಲೂ ಇರಬೇಕು. ಇಂತಹ ಜನಸ್ನೇಹಿ ಸರ್ಕಾರಿ ವ್ಯವಸ್ಥೆ ರೂಪಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಕಾಲ ಯೋಜನೆಗೆ ಇನ್ನಷ್ಟು ಕಾಯಕಲ್ಪ ಮಾಡಲಾಗುವುದು ಎಂದು ಅವರು ನುಡಿದರು.

ಮುಖ್ಯಮಂತ್ರಿಯವರ ಸ್ವಾತಂತ್ರ್ಯೋತ್ಸವ ಸಂದೇಶದ ಮುಖ್ಯಾಂಶಗಳು:
• ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹೃದಯಪೂರ್ವಕ ಶುಭಾಶಯಗಳು. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಜನತೆಗೆ ಸಂದೇಶ ನೀಡುವ ಅವಕಾಶ ಲಭಿಸಿದ್ದು, ನನ್ನ ಸೌಭಾಗ್ಯ.
• ಕರ್ನಾಟಕದ ಸ್ವಾತಂತ್ರ್ಯ ಹೋರಾಟ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಸಿಪಾಯಿದಂಗೆಗೆ 40 ವರ್ಷ ಮೊದಲೇ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಇತರರಿಗೆ ಸ್ಫೂರ್ತಿ ನೀಡುವಂತದ್ದು.
• ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನು ಅಧಿಕೃತವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
• ಸಾಹುಕಾರ ಚೆನ್ನಯ್ಯ, ರಾಣಿ ಅಬ್ಬಕ್ಕ, ಸ್ವಾಮಿ ರಮಾನಂದ ತೀರ್ಥರ ಕೊಡುಗೆ ಅನನ್ಯವವಾದದುಉ. ಇವರ ಸ್ಮರಣೆ ನಮ್ಮ ಕರ್ತವ್ಯ.
• ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯತೆ, ರಾಷ್ಟ್ರಾಭಿಮಾನ ತುಂಬಿ ದೇಶ ಕಟ್ಟಲು ಜನರನ್ನು ಪ್ರೇರೇಪಿಸಿ, ನಿಗದಿತ ಗುರಿಯಿಟ್ಟು ಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ವಿದ್ಯುದೀಕರಣ, ಸ್ವಚ್ಛತೆಯಿಂದ ಬಾಹ್ಯಾಕಾಶ ಯೋಜನೆಯ ವರೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
• ಪಿಎಂ-ಕಿಸಾನ್, ಆಯುಷ್ಮಾನ್ ಭಾರತ್, ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಮತ್ತಿತರ ಜನಪರ ಯೋಜನೆಗಳು ಜನರ ಜೀವನದಲ್ಲಿ ಹೊಸ ಚೈತನ್ಯ ತುಂಬಿದೆ.
• ರಾಜ್ಯದಲ್ಲಿ ಇಂದಿನಿಂದ ನವ ಕರ್ನಾಟಕ ನಿರ್ಮಾಣದ ಘೋಷಣೆ ಮಾಡುತ್ತಿದ್ದೇನೆ. ಹೊಸ ಚಿಂತನೆ, ಹೊಸದಾರಿ, ಹೊಸ ದಿಕ್ಸೂಚಿಯೊಂದಿಗೆ, ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲಗಳನ್ನು ಜನಹಿತಕ್ಕಾಗಿ ಬಳಕೆ ಮಾಡಿಕೊಂಡು ಕೃಷಿ, ಉತ್ಪಾದನಾ ವಲಯ ಮತ್ತು ಸೇವಾ ವಲಯಗಳ ವೈಜ್ಞಾನಿಕ ಅಭಿವೃದ್ಧಿ ಮಾಡಲಾಗುವುದು.
• ಕೃಷಿ ಬಹಳ ಮುಖ್ಯ ವಲಯ. ನಾವು ಹಸಿರು ಕ್ರಾಂತಿ ನೋಡಿದ್ದೇವೆ. ಇಂದು ರೈತರ ಬದುಕಿನಲ್ಲಿ ಕ್ರಾಂತಿ ಆಗಬೇಕಿದೆ. ರೈತ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
• ಕೃಷಿ ವಲಯದಲ್ಲಿ ಶೇ 1, ಉತ್ಪಾದನಾ ವಲಯದಲ್ಲಿ ಶೇ. 4 ಹಾಗೂ ಸೇವಾ ವಲಯದಲ್ಲಿ ಶೇ. 10ರಷ್ಟು ಬೆಳವಣಿಗೆ ಇದೆ. ನಮಗೆ ಇದರ ಅರಿವಿದೆ.
• ಆಳುವುದು ಬೇರೆ, ಆಡಳಿತ ಬೇರೆ. ಇಂದು ಆಳುವವರು ಆಡಳಿತ ನಡೆಸುತ್ತಿದ್ದಾರೆ. ಆಡಳಿತ ನಡೆಸುವವರು ಆಳುತ್ತಿದ್ದಾರೆ. ಈ ವ್ಯತ್ಯಾಸ ಅರಿತು ರಾಜಕೀಯ ನಾಯಕತ್ವ ಹಾಗೂ ಇಚ್ಛಾಶಕ್ತಿಯೊಂದಿಗೆ ಜನರ ಮನೆಬಾಗಿಲಿಗೇ ಸರ್ಕಾರದ ಸೇವೆ ಒದಗಿಸಲಾಗುವುದು.
• ಕಳೆದ ಒಂದೂವರೆ ವರ್ಷಗಳಿಂದ ಕರೋನಾ ಸಾಂಕ್ರಾಮಿಕದ ಸವಾಲನ್ನು ಎದುರಿಸುತ್ತಿದ್ದೇವೆ. ನಿಕಟಪೂರ್ವ ಮುಖ್ಯಮಂತ್ರಿಗಳು ಪರಿಶ್ರಮಪಟ್ಟು, ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಪಡಿಸಿ, ಸಮರ್ಥವಾಗಿ ಎದುರಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೆತ್ತಿಕೊಂಡಿದ್ದರು. ಇದೇ ಹಾದಿಯಲ್ಲಿ ನಮ್ಮ ಸರ್ಕಾರವೂ ಮುಂದುವರೆಯಲಿದೆ.
• ನಮ್ಮ ಸರ್ಕಾರವ ಕೋವಿಡ್ ನಿರ್ವಹಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ನಾನು ಸ್ವತಃ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ, ನಮ್ಮ ಎಲ್ಲ ಶಕ್ತಿ ಸಾಮಥ್ರ್ಯ ಬಳಸಿ, ಹೆಚ್ಚಿನ ಆತ್ಮವಿಶ್ವಾಸದಿಂದ ಕೋವಿಡ್ ನಿರ್ವಹಣೆ ಮಾಡಲಾಗುವುದು.
• ಅಧಿಕಾರ ಸ್ವೀಕರಿಸಿದ ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.
• ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸುಮಾರು ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಸುಮಾರು 18 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
• ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ಮೊತ್ತ ಹೆಚ್ಚಿಸಲಾಗಿದ್ದು, 34 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.
• ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಸರ್ಕಾರದ ಆರ್ಥಿಕ ನೀತಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು,, ಮಹಿಳೆಯರು ಹಾಗೂ ಯುವಕರ ವೈಯಕ್ತಿಕ ಆದಾಯ ಹೆಚ್ಚಿಸಲು ಆದ್ಯತೆ ನೀಡಲಿದೆ.
• ಹೆಣ್ಣುಮಕ್ಕಳ ಆದಾಯ ಹೆಚ್ಚಿಸುವುದರೊಂದಿಗೆ ನಾರೀ ಶಕ್ತಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು.
• ಕೈಗಾರಿಕಾ ವಲಯದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಸ್ವಾತಂತ್ರ್ಯಾನಂತರ ಹಿರಿಯರ ನೇತೃತ್ವದಲ್ಲಿ ಹಲವು ಕಾರ್ಖಾನೆಗಳು ಸ್ಥಾಪನೆಯಾದವು. ಸರ್ ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಾಗದ, ಕಬ್ಬಿಣ ಮತ್ತು ಉಕ್ಕು, ಸಾಬೂನು ಹೀಗೆ ಹಲವಾರು ರಂಗದಲ್ಲಿ ಕಾರ್ಖಾನೆಗಳ ಸ್ಥಾಪನೆಯಾದವರು. ಕರಾವಳಿ ಭಾಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅಭಿವೃದ್ಧಿ ಹೊಂದಿದೆ.
• ಈ ಪರಂಪರೆಯನ್ನು ಮುಂದುವರೆಸುತ್ತಾ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಇನ್‍ವೆಸ್ಟ್ ಕರ್ನಾಟಕ, ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು. ಆ ಮೂಲಕ ಹೆಚ್ಚು ಬಂಡವಾಳ ಆಕರ್ಷಿಸುವುದರೊಂದಿಗೆ ಹೆಚ್ಚು ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗುವುದು.
• ರಾಜ್ಯದ ಅಭಿವೃದ್ಧಿಯಲ್ಲಿ ಕಾನೂನು ಸುವ್ಯವಸ್ಥೆಯ ಪಾತ್ರವೂ ಮುಖ್ಯವಾದುದು. ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಕಾರ್ಯಕ್ಷಮತೆ, ಪ್ರಾಮಾಣಿಕತೆ ಹಾಗೂ ದಕ್ಷತೆಗೆ ದೇಶದಲ್ಲೇ ನಂ. 1 ಎನಿಸಿಕೊಂಡಿದ್ದಾರೆ. ಹಲವು ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
• ನಾಡು, ನುಡಿ, ನೆಲ, ಜಲ, ಜನರ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ನ್ನು ಅನುಷ್ಠಾನಗೊಳಿಸಿ 5.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ.
• ಮೇಕೆದಾಟು, ಮಹದಾಯಿ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅನುಮೋದನೆ ಪಡೆದು ಯೋಜನೆ ಪ್ರಾರಂಭಿಸಲಾಗುವುದು.
• ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಆಗಸ್ಟ್ 15, 2023ರ ವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಆಗಲಿದೆ.
• ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗೆ ಅಮೃತ ಗ್ರಾಮ ಪಂಚಾಯತಿಗಳು, ಅಮೃತ ಗ್ರಾಮೀಣ ವಸತಿ ಯೋಜನೆ ಅಮೃತ ರೈತ ಉತ್ಪಾದಕ ಸಂಸ್ಥೆಗಳು, ಅಮೃತ ನಿರ್ಮಲ ನಗರ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ಸ್ವಸಹಾಯ ಕಿರು ಉದ್ದಿಮೆಗಳು, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ, ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ, ಅಮೃತ ಕೌಶಲ್ಯ ತರಬೇತಿ ಯೋಜನೆ, ಸ್ಟಾರ್ಟಪ್ ಉತ್ತೇಜನ ಯೋಜನೆ, ಅಮೃತ ನಗರೋತ್ಥಾನ, ಅಮೃತ ಕ್ರೀಡಾ ದತ್ತು ಯೋಜನೆ ಮೊದಲಾದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು:
• ರಾಜ್ಯದ ಮುಖ್ಯಮಂತ್ರಿಯಾಗಿ ಮುಂದಿನ ದಿನಗಳಲ್ಲಿ ಹೊಸ ಬದಲಾವಣೆ ತರುವ ಕನಸು, ಆತ್ಮವಿಶ್ವಾಸ ಹೊಂದಿದ್ದೇನೆ. ಹಲವರು ನನ್ನ ಬಗ್ಗೆ ವ್ಯಕ್ತಪಡಿಸಿರುವ ಅನುಮಾನ, ಟೀಕೆಗಳು ನನಗೆ ಆಶೀರ್ವಾದ ಎಂದು ಭಾವಿಸಿದ್ದೇನೆ. ಅನುಮಾನ, ಟೀಕೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಕಾರ್ಯ ನಿರ್ವಹಿಸುವೆನು.
• ಪ್ರತಿಯೊಬ್ಬ ಕನ್ನಡಿಗ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ಗಡಿ ಇರಲಿ, ನಾಡಿರಲಿ, ಜನರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಗಡಿ ಕಾಯುವ ಸೈನಿಕರಿಗೆ, ಹೊಲದಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗೆ ಹಾಗೂ ಕಾರ್ಮಿಕರಿಗೆ ನನ್ನ ಸಲಾಂ.
• ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ಜೈ ಜವಾನ್, ಜೈ ಕಿಸಾನ್ , ಜೈ ವಿಜ್ಞಾನ್ ಎಂಬ ತತ್ವ ನಮ್ಮದು. 21ನೇ ಶತಮಾನ ಜ್ಞಾನದ ಶತಮಾನ. ಕರ್ನಾಟಕ ಜ್ಞಾನ ಭರಿತವಾದುದು. ಜ್ಞಾನಾಧಾರಿತ ಉದ್ಯಮಗಳು ಮುಂಚೂಣಿಯಲ್ಲಿವೆ. ಅದರಲ್ಲಿಯೂ ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
• ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಪ್ರಾರಂಭಿಸಲಾಗುವುದು. ನಗರದ ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈ ಓವರ್, ರಿಂಗ್ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ 75 ಕೆರೆ/ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು.
• ರಾಜಧಾನಿಯಿಂದ ಗಡಿಯವರೆಗೆ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿ, ಅಭಿವೃದ್ಧಿ ಕೈಗೊಳ್ಳಲಾಗುವುದು.
• ನಾಡು ನುಡಿಯ ಶ್ರೀಮಂತಿಕೆಗೆ ಪ್ರಾಮುಖ್ಯ ನೀಡಲಾಗುವುದು. ನಾಡಿನ ಸಾಹಿತ್ಯ ಸಂಸ್ಕೃತಿ ಉಳಿಸಲು ಬದ್ಧ.
• ಮುಂದಿನ 25 ವರ್ಷಗಳಲ್ಲಿ ಕರ್ನಾಟಕ ವಿಶ್ವದಲ್ಲೇ ನಂ. 1 ರಾಷ್ಟ್ರವಾಗಿ ಅಭಿವೃದ್ಧಿ ಹೊಂದಬೇಕೆನ್ನುವ ಆಶಯ ನಮ್ಮದು.
• ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಗೆ ಭದ್ರ ಬುನಾದಿ ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
• ಕೆಲವೇ ದಿನಗಳಲ್ಲಿ ಈ ಬದಲಾವಣೆ ಪ್ರಾರಂಭವಾಗಲಿದೆ. ಇದಕ್ಕೆ ನಿಮ್ಮ ಸಹಾಯ ಸಹಕಾರ ಅತಿ ಅಗತ್ಯ.

ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ : ಮುಖ್ಯಮಂತ್ರಿ ಕರೆ

ಬೆಂಗಳೂರು, ಆಗಷ್ಟ್ 14: ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಕರೆ ನೀಡಿದರು.

ನಗರದ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು, ಸ್ವಾತಂತ್ರ್ಯ ನನ್ನ ಆ ಜನ್ಮ ಸಿದ್ಧ ಹಕ್ಕು ಎಂಬ ಗೋಪಾಲ ಕೃಷ್ಣ ಗೋಖಲೆಯವರ ವೀರೋಚಿತ ಘೋಷಣೆಯೊಂದಿಗೆ ಪ್ರಾರಂಭವಾದ ಭಾರತದ ಸ್ವಾತಂತ್ರ್ಯದ ಹೋರಾಟ ಭಗತ್ ಸಿಂಗ್ ಅವರಂತಹ ಯುವಕರ ಬಲಿದಾನ, ವೀರ ಸಾವರ್ಕರ್ ಅವರಂತಹ ಮಹನೀಯರ ತ್ಯಾಗದ ಮೂಲಕ ಮುಂದಡಿ ಇಟ್ಟಿದ್ದು ಸ್ಮರಣಾರ್ಹ. ಸ್ವಾತಂತ್ರ್ಯ ಚಳುವಳಿಯ ಸಾತ್ವಿಕ ಹೋರಾಟಕ್ಕೆ ಸತ್ಯದ ಮೆರಗು ನೀಡಿದವರು ಮಹಾತ್ಮ ಗಾಂಧಿ, ಇವರೆಲ್ಲರನ್ನು ನಾವು ಸದಾಕಾಲ ಸ್ಮರಿಸಬೇಕು.ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ನಾವು ಹಗಲಿರಳು ಕಾಯಬೇಕು.ವಿಧಾನಸೌಧದ ಮೆಟ್ಟಿಲುಗಳು ನವಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್ ಗೋಯಲ್ ಮತ್ತು ಮಂಜುನಾಥ್ ಪ್ರಸಾದ್, ಡಾ. ಶಾಲಿನಿ ಗೋಯಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ: ಧಾರವಾಡ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸಿದ ದಂಡಿಯಾತ್ರೆ ಮತ್ತು ವೀರ ರಾಣಿ ಕಿತ್ತೂರು ಚೆನ್ನಮ್ಮ ಕಿರುನಾಟಕಗಳು ಹಾಗೂ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸಿದ ಏಸೂರು ಕೊಟ್ಟರು ಈಸೂರು ಬಿಡೆವೂ ಮತ್ತು ವಿಧುರಾಶ್ವಥ್ ನಾಟಕಗಳು ಸಮಾರಂಭದ ವಿಶೇಷ ಆಕರ್ಷಣೆಗಳಾಗಿದ್ದವು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾನಪದ ಪ್ರಕಾರಗಳಾದ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಕೀಲು ಕುದುರೆ ಒಳಗೊಂಡಂತೆ ವಿವಿಧ ನೃತ್ಯ ಪ್ರಕಾರಗಳು ಪ್ರೇಕ್ಷಕರನ್ನು ರಂಜಿಸಿದವು.

 

ಜಮೀರ್ ಅವರ ಮೇಲಿನ ಇ.ಡಿ. ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ. ಸುರೇಶ್

ನವದೆಹಲಿ:‘ಎರಡು ವರ್ಷಗಳ ಹಿಂದಿನ ಐಎಂಎ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಖಾನ್ ಅವರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, ‘ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಅವರು ಬಹಳ ಹಿಂದೆಯೇ ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ ಎರಡು ವರ್ಷಗಳ ನಂತರ ದೆಹಲಿ ಕಚೇರಿ ಇಡಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕಾರಣ, ಬೆಂಗಳೂರಿನಲ್ಲೇ ಇಡಿ ಕಚೇರಿ ಇದೆ. ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಹಿತಾಸಕ್ತಿ ಪ್ರೇರಿತ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿಕೊಂಡು, ಸಂಬಂಧಪಟ್ಟವರಿಗೆ ರಾಜಕೀಯ ತೊಂದರೆ ನೀಡುವ ಪರಿಪಾಠವನ್ನು ಕೇಂದ್ರ ಸರ್ಕಾರ ಪಾಲಿಸುತ್ತಾ ಬಂದಿದೆ. ಇದನ್ನು ನಾವು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಇದು ದ್ವೇಷದ ರಾಜಕಾರಣ’ ಎಂದರು.

‘ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 41 ವರ್ಷಗಳ ನಂತರ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಇದು ನಮ್ಮೆಲ್ಲರಿಗೂ ಸಂತೋಷದ ವಿಚಾರವಾಗಿದ್ದು, ಇಡೀ ತಂಡಕ್ಕೆ ನಾವು ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಇನ್ನು ಇತರೆ ಕ್ರೀಡಾಪಟುಗಳು ಸೆಮಿಫೈನಲ್ ಹಾಗೂ ಫೈನಲ್ ಸುತ್ತು ಪ್ರವೇಶಿಸಿದ್ದು, ಅವರಿಗೂ ಯಶಸ್ಸು ಸಿಗಲಿ, ಭಾರತದ ಪತಾಕೆ ಹಾರಲಿ ಎಂದು ಶುಭ ಹಾರೈಸುತ್ತೇನೆ’ ಎಂದು ಸುರೇಶ್ ತಿಳಿಸಿದರು.