ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರು:ಕೋವಿಡ್ ನಿರ್ವಹಣೆಗೆ ಜನರಿಗೆ ನೆರವಾಗಲು ಕಾಂಗ್ರೆಸ್ ಹಮ್ಮಿಕೊಂಡಿರುವ ‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.

ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಶಾಸಕಿ ಸೌಮ್ಯ ರೆಡ್ಡಿ ಇದ್ದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

ಕೆಪಿಸಿಸಿ ವೈದ್ಯರ ಘಟಕ ಇಂದು ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಅಧ್ಯಾಯ ಬರೆದಿದೆ.ಈ ಕಾರ್ಯಕ್ರಮ ಜನರ ಬಳಿಗೆ ಹೋಗಬೇಕು, ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕೆ ಮಾತ್ರವಲ್ಲ ಕಷ್ಟದಲ್ಲಿರುವ ಜನರ ಸೇವೆ ಮಾಡಬೇಕು ಎಂದು ರೂಪಿಸಲಾಗಿದೆ.

ವೈದ್ಯ ಘಟಕ ಹಾಗೂ ಮಾಜಿ ಆರೋಗ್ಯ ಸಚಿವರ ಜತೆ ಚರ್ಚಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಬಿಟಿಎಂ ಹಾಗೂ ಜಯನಗರದಲ್ಲಿ ಈ ಪ್ರಾಯೋಗಿಕ ಕಾರ್ಯಕ್ರಮ ಮಾಡಿ ಅದನ್ನು ಇಡೀ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ.

ಇದು ಮಾನವೀಯತೆಯ ಪ್ರಶ್ನೆ. ಈ ಪರಿಸ್ಥಿತಿ ನಿಭಾಯಿಸಲು ಕರ್ನಾಟಕ ಸರ್ಕಾರ ವಿಫಲವಾಗಿರುವುದನ್ನು ಎಲ್ಲರೂ ಒಪ್ಪುತ್ತಿದ್ದಾರೆ. ಈ ಸೋಂಕು ಇಷ್ಟು ತೀವ್ರವಾಗಲು ಸರ್ಕಾರವೇ ಕಾರಣ.ಪ್ರತಿ ಪಂಚಾಯಿತಿ ಮತ್ತು ವಾರ್ಡ್ ಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಅವರನ್ನು ಕೊರೋನಾ ಕಾಂಗ್ರೆಸ್ ವಾರಿಯರ್ ಎಂದು ಕಳೆಸಿಕೊಡುತ್ತಿದ್ದೇವೆ. ರಾಜ್ಯದ್ಯಂತ 15 ಸಾವಿರ ಯುವಕರನ್ನು ಕಾಂಗ್ರೆಸ್ ವಾರಿಯರ್ ಎಂದು ಗುರುತಿಸಲಾಗಿದೆ. ಈ ವಾರಿಯರ್ಸ್ ಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇವರಿಗೆ ವಿಮೆಯನ್ನು ಮಾಡಿಸಲಾಗುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೇಗೆ ಹೋರಾಟ ಮಾಡಲಾಗಿತ್ತೋ ಅದೇ ರೀತಿ ಈ ಮಹಾಮಾರಿ ದೂರ ಮಾಡಲು, ರಾಜ್ಯದ ಜನರಿಗೆ ಧೈರ್ಯ ಕೊಡಲು ಈ ಪ್ರಯತ್ನ ಮಾಡಲಾಗುತ್ತಿದೆ.

ಕೊರೋನ ಸಂಕಷ್ಟದಲ್ಲಿ ಸುಳ್ಳು ಆಪಾದನೆಗಳನ್ನು ಮಾಡಿ ರಾಜಕೀಯ ಬೇಳೆ ಬೇಯಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು – ಜುಲೈ 23, 2020: ಕೊರೋನದಂತಹ ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿರುವಾಗ ಸುಳ್ಳು ಆಪಾದನೆ ಮಾಡಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ನ ಆಪಾದನೆಗಳಿಗೆ ತಿರುಗೇಟು ನೀಡಿದ್ದಾರೆ.

ಯಾವುದೇ ರಚನಾತ್ಮಕ ವಿರೋಧ ಪಕ್ಷಗಳು ಈ ಸಂದರ್ಭದಲ್ಲಿ ಇಂತಹ ಸುಳ್ಳು ಆಪಾದನೆ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಸಚಿವರ ಜಂಟಿ ಸುದ್ದಿಗೋಷ್ಠಿಯ ಮುಖ್ಯಾಂಶಗಳು

• ಕಾಂಗ್ರೆಸ್ ತಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದಾರೆ.

• ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಹಗರಣ ನಡೆದಿದೆ ಎನ್ನುವುದು ಸಂಪೂರ್ಣ ಸುಳ್ಳು. ರಾಜ್ಯದ ಜನತೆ ಯಾವತ್ತೂ ನಿಮ್ಮನ್ನು ಕ್ಷಮಿಸುವುದಿಲ್ಲ.

• ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಇದು ಶೋಭೆ ತರುವುದಿಲ್ಲ. 13-14 ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆಗೂ, ಖರ್ಚಿಗೂ ಅನುಮೋದನೆಗೂ ವ್ಯತ್ಯಾಸ ತಿಳಿದಿದೆ ಎಂದು ಭಾವಿಸುತ್ತೇನೆ.

• ವೈದ್ಯಕೀಯ ಶಿಕ್ಷಣ ಇಲಾಖೆಗೆ 800 ಕೋಟಿ ರೂಗಳ ಇಲಾಖೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಬಂದಿದೆ. ಅದಕ್ಕೆ ಅನುಮೋದನೆ ಇನ್ನೂ ದೊರೆತಿಲ್ಲ.

• ಸರ್ಕಾರ ಡ್ರ್ಯಾಗರ್ ಕಂಪನಿಯ ವೆಂಟಿಲೇಟರ್ ಖರೀದಿಸಿದೆ. ಅದು ವಿಶ್ವದಲ್ಲೇ ಅತ್ಯುತ್ತಮ ಬ್ರಾಂಡ್. ನಿಮ್ಮ ಮನೆಯಲ್ಲೇ ವೈದ್ಯರಿದ್ದಾರೆ. ಬೇರೆ ತನಿಖೆಯ ಅಗತ್ಯವಿಲ್ಲ ಅವರನ್ನೇ ಕೇಳಿದರೂ ಗೊತ್ತಾಗುತ್ತದೆ.

• ಕೊರೋನ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪುನಶ್ಚೇತನ ಮಾಡುತ್ತೇವೆ ಅಂತ ಉದ್ದೇಶ ಇದ್ದರೆ ಅದು ನಿಮ್ಮ ಭ್ರಮೆ. ಜನ ಎಲ್ಲಾ ಗಮನಿಸುತ್ತಿದ್ದಾರೆ. ನಿಮ್ಮನ್ನು ಕ್ಷಮಿಸುವುದಿಲ್ಲ.

• ಕಳೆದ 120 ದಿನಗಳಿಂದ ಯಾವ ರಜೆಯನ್ನೂ ತೆಗೆದುಕೊಳ್ಳದೆ, ಮನೆಯಲ್ಲಿ ಕೊರೋನ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಈ ರೀತಿ ಟೀಕಿಸುವುದು ಸರಿಯಲ್ಲ.

• ಮುಖ್ಯಮಂತ್ರಿಗಳು ಈ ವಯಸ್ಸಿನಲ್ಲೂ ಅತ್ಯಂತ ಸಕ್ರಿಯವಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕೆಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

• ಇಂತಹ ಸಮಯದಲ್ಲಿ ಕೊರೋನ ನಿಯಂತ್ರಣಕ್ಕೆ ಸಹಕರಿಸುವುದನ್ನು ಬಿಟ್ಟು ಈ ರೀತಿಯ ಸುಳ್ಳು ಆಪಾದನೆ ಮಾಡಿದರೆ ಜನ ಕ್ಷಮಿಸುವುದಿಲ್ಲ.

ಪೊಲೀಸರ ಸಮ್ಮುಖದಲ್ಲೇ ಪರಾಜಿತ ಅಭ್ಯರ್ಥಿ ಕಪಾಳಕ್ಕೆ ಹೊಡೆದ ಪಾಲಿಕೆ ಸದಸ್ಯ

ದಾವಣಗೆರೆ: ಪಾಲಿಕೆ ಸದಸ್ಯನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಹಲ್ಲೆ‌ಮಾಡಿದವರಿಗೆ ಪೊಲೀಸ್ ಠಾಣೆಯಲ್ಲಿ ಕಪಾಳಕ್ಕೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೊಡೆದಿದ್ದಾರೆ. ‌ನಗರದ ಬಸವ ನಗರ ಪೊಲೀಸ್ ಠಾಣೆಯಲ್ಲಿ‌ ನೂರಾರು ಜನ ಸೇರಿದ್ದ ವಿಡಿಯೋ ವೈರಲ್ ಆಗಿದೆ.

ಕಾಯಿಪೇಟೆಯ ಬಿಜೆಪಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ ಮೇಲೆ ಪರಾಜಿತ ಪಕ್ಷೇತರ ಅಭ್ಯರ್ಥಿ ಹಲ್ಲೆ ಮಾಡಿದ್ದ. ಹಲ್ಲೆಯ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ನೂರಾರು‌ ಜನ ಬಿಜೆಪಿ ಕಾರ್ಯಕರ್ತರು ನುಗ್ಗಿದ್ದರು. ಪೊಲೀಸರ ಸಮ್ಮಖದಲ್ಲಿ ಪಾಲಿಕೆ ಸದಸ್ಯ ನ ಹಲ್ಲೆ ಮಾಡಿದ್ದ ಪರಾಜಿತ ಅಭ್ಯರ್ಥಿ ಮಂಜುನ ಸ್ನೇಹಿತ ಗುಬ್ಬಿ ಮಂಜುನ ಕಪಾಳಕ್ಕೆ ಯಶವಂತರಾವ್ ಜಾಧವ್ ಹೊಡೆದಿದ್ದಾರೆ.

ಈ ಸಂಬಂಧ ಎರಡು‌ ಕಡೆಯಿಂದ ದೂರು ದಾಖಲು ಮಾಡಲಾಗಿದೆ. ಪಾಲಿಕೆ ಸದಸ್ಯನ ಮೇಲೆ ಹಲ್ಲೆ ಪ್ರಕರಣ ಸಿಸಿ ಕ್ಯಾಮರಾದಲ್ಲಿ‌ ದಾಖಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಕೊರೊನ ನಿರ್ವಹಣೆ ಅವ್ಯವಹಾರ ;ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಕೊರೊನ ನಿರ್ವಹಣೆಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರವಾಗಿದ್ದು ಈ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿ‌ ನಡೆಸಿದ ಅವರು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಆಗಿರುವ ಅವ್ಯವಾರವನ್ನು ದಾಖಲೆಗಳ ಸಮೇತ ಎಳೆ ಎಳೆಯಾಗಿ ಬಿಡಿಸಿಟ್ಟರು.

ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು :

ಕೋವಿಡ್-19 ಮನುಕುಲದ ಭೀಕರ ಸಂಕಷ್ಟಕ್ಕೆ ಕಾರಣವಾಗಿದೆ. ಇದನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪಕ್ಷಾತೀತವಾಗಿ ಬೆಂಬಲ ನೀಡಲಾಯಿತು. ಮಾರ್ಚ್ 24ರಂದು ಪ್ರಧಾನ ಮಂತ್ರಿಗಳು ಲಾಕ್‍ಡೌನ್ ಘೋಷಣೆ ಮಾಡಿದಾಗ ದೇಶಾದ್ಯಂತ ಕೋರೊನಾ ಸೋಂಕಿತರ ಸಂಖ್ಯೆ ಕೇವಲ 564 ಆಗಿತ್ತು. ಆ ಅವದಿಯಲ್ಲಿ ಕರ್ನಾಟಕದಲ್ಲಿ ಕೇವಲ ಒಂದು(1) ಪ್ರಕರಣ ಮಾತ್ರ ಪತ್ತೆಯಾಗಿತ್ತು.

ಲಾಕ್‍ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕುರುಕ್ಷೇತ್ರ 18 ದಿನದಲ್ಲಿ ಮುಗಿಯಿತು. ನಾವು 21 ದಿನಗಳಲ್ಲಿ ಕೊರೋನ ವಿರುದ್ದ ಜಯಿಸುತ್ತೇವೆ, ಮುಂದೆ ನೆಮ್ಮದಿಯಿಂದ ಜೀವನ ಸಾಗಿಸೋಣ ಎಂದು ದೇಶದ ಜನತೆಗೆ ಪ್ರಧಾನಿಗಳು ಆಶ್ವಾಸನೆಯನ್ನು ನೀಡಿದ್ದರು. ಪ್ರಧಾನಿಯವರ ಮಾತಿನಂತೆ ದೇಶದ ಜನತೆ ಚಪ್ಪಾಳೆ ತಟ್ಟಿದರು. ಜಾಗಟೆ ಬಾರಿಸಿದರು. ಹೂಮಳೆಗರೆದರು.

ಆದರೂ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದೆ ಈಗ ಸೋಂಕಿತರ ಸಂಖ್ಯೆ 12 ಲಕ್ಷ ಮೀರಿದೆ. ಸೋಂಕಿನಿಂದ ಸತ್ತವರ ಸಂಖ್ಯೆ ಈವರೆಗೆ 28,732 ಅದೇ ರೀತಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71,069 ಮೀರಿದೆ. ಸತ್ತವರ ಸಂಖ್ಯೆ 1464.

ಇಷ್ಟೆಲ್ಲ ಆದರೂ ಪ್ರಧಾನಿಯವರಾಗಲಿ ಕೇಂದ್ರದ ಮಂತ್ರಿಗಳಾಗಲಿ ಅಥವಾ ರಾಜ್ಯದ ಮುಖ್ಯಮಂತ್ರಿಗಳು ಮತ್ತವರ ಸಂಪುಟ ಸಹದ್ಯೋಗಿಗಳು ಅನುಕ್ರಮವಾಗಿ ದೆಹಲಿ ಮತ್ತು ಬೆಂಗಳೂರು ಬಿಟ್ಟು ಯಾರೂ ಹೊರಗೆ ಹೋಗಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

ಲಾಕ್‍ಡೌನ್ ಅವದಿಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ನರಕ ಯಾತನೆ ಅನುಭವಿಸಿದರು. ಇದಕ್ಕಾಗಿ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದ್ದಾವೆ.

ಕೋವಿಡ್-19ರ ನಿಯಂತ್ರಣದ ಹಿನ್ನೆಲೆಯಲ್ಲಿ 4000 ಕೋಟಿಗೂ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದ್ದಾರೆ. ಇದರಲ್ಲಿ 2000 ಕೋಟಿಗೂ ಹೆಚ್ಚ ಭ್ರಷ್ಟಚಾರ ನಡೆಸಿ ರೋಗಿಗಳು ಪರದಾಡುವಂತೆ ಮಾಡಿದ್ದಾರೆ.

ಭ್ರಷ್ಟಚಾರದ ವಿಚಾರವನ್ನು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಬಯಲಿಗೆ ತರಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ
ಮೂರು ದಿನಗಳ ಹಿಂದೆ ಉಪ-ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ 324 ಕೋಟಿ ರೂ.ಗಳನ್ನು ಮಾತ್ರ ಕೊರೊನಾ ಉಪಕರಣಗಳ ಖರೀದಿಗೆ ಖರ್ಚು ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ಸಾಮಗ್ರಿಗಳ ದರ ಒಪ್ಪಂದಗಳನ್ನು ಸರ್ಕಾರ ಮಾಡಿಕೊಂಡು, ಖರೀದಿ ಆದೇಶಗಳನ್ನು ನೀಡಿ, ಸಾಮಗ್ರಿಗಳನ್ನು ಸ್ವೀಕರಿಸಿ ಕೆಲವು ಇಲಾಖೆಗಳು ಕೆಲವು ಸಾಮಾಗ್ರಿಗಳಿಗೆ ಪಾವತಿಸಿದ್ದಾರೆ.

ದರ ಒಪ್ಪಂದ ಮಾಡಿಕೊಂಡು ಇನ್ನು ಅಸಂಖ್ಯಾತ ಸಾಮಾಗ್ರಿಗಳಿಗೆ ಹಣವನ್ನು ಪಾವತಿಸಿಲ್ಲ. ದುಬಾರಿ ದರಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸಾಮಾಗ್ರಿ ಸರಬರಾಜಾಗಿದೆ.
ಇನ್ನು ಕೆಲವು ಸರಬರಾಜಾಗಬೇಕಾಗಿದೆ. ಆದರೆ ಒಪ್ಪಂದ ಮಾಡಿಕೊಂಡಿರುವುದರಿಂದ ಹಣ ಪಾವತಿಸಬೇಕಾಗುತ್ತದೆ.

ಸಚಿವರು ಆರೋಗ್ಯ ಇಲಾಖೆಯಲ್ಲಿ ಪಾವತಿಸಿರುವ ಹಣದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಪಾವತಿ ಆಗಬೇಕಾದ ಹಣದ ಬಗ್ಗೆ ಬಾಯ್ಬಿಟ್ಟಿಲ್ಲ. ಪಾವತಿಸಿರುವ ಸಾಮಾಗ್ರಿಗಳಲ್ಲೂ ಬ್ರಹ್ಮಂಡ ಭ್ರಷ್ಟಚಾರ ನಡೆದಿದೆ.

ಅಧಿಕೃತ ಮಾಹಿತಿ ಪ್ರಕಾರ ಈ ವಿವಿಧ ಇಲಾಖೆಗಳಲ್ಲಿ 4167 ಕೋಟಿ ರೂ. ವೆಚ್ಚ ಮಾಡಿರುತ್ತಾರೆ.

ಇಷ್ಟೇ ಅಲ್ಲದೆ, ಖರೀದಿ ಆದೇಶಗಳನ್ನು ಮಾಡಿ ಹಣ ಪಾವತಿ ಮಾಡಬೇಕಾದ ಮೊತ್ತಕ್ಕೆ ಇನ್ನೂ ಲೆಕ್ಕ ಸಿಗಬೇಕಿದೆ. ಉಪ ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿಗಳು ಇಬ್ಬರೂ ಅಧಿಕಾರಿಗಳೊಂದಿಗೆ ಸೇರಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಕ್ವಾರಂಟೈನ್ ಕೇಂದ್ರಗಳು, ಆಂಬ್ಯುಲೆನ್ಸ್‍ಗಳು, ಪೌಷ್ಠಿಕ ಆಹಾರ, ಪರೀಕ್ಷೆ, ರೋಗ ಪತ್ತೆ ಮುಂತಾದವುಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಆರೋಗ್ಯ ಇಲಾಖೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿರುವ ಮೊತ್ತ 3500 ಕೋಟಿಗಳೆಂದು ಕೆ.ಡಿ.ಪಿ. ಸಭೆಯ ನಡವಳಿಗಳಲ್ಲಿ ಪ್ರಸ್ತಾಪಿಸಲಾಗಿದೆ (ಅನೆಕ್ಸ್-4)

ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಕೋರಿ ದಿನಾಂಕ : 09.06.2020, 03.07.2020 ಮತ್ತು 10.07.2020ರಂದು ಸುಮಾರು 20 ಪತ್ರಗಳನ್ನು ಸರ್ಕಾರಕ್ಕೆ ಬರೆಯಲಾಗಿದೆ. ಇದುವರೆಗೂ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಮುಖ್ಯಮಂತ್ರಿಗಳು ಮಾಧ್ಯಮದ ಮುಂದೆ ಕುಳಿತು ಮಾಹಿತಿ ನೀಡುತ್ತೇವೆ ಸಹಕರಿಸಿ ಎಂದು ಪದೇ ಪದೇ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ನಾವು ಹಿಂದೆ ನಡೆಸಿದ ಪತ್ರಿಕಾಗೋಷ್ಠಿಗಳಲ್ಲಿ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದೆವು. ಲೆಕ್ಕ ಕೊಡಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ನಡೆಸಿದೆವು. ಆದರೆ, ಮುಖ್ಯಮಂತ್ರಿಗಳು ಮಾಧ್ಯಮಗಳ ಮುಂದೆ ನೀಡುವ ಹೇಳಿಕೆಗಳು ಮಾಹಿತಿಯೇ?

ಸುಮಾರು 85 ಲಕ್ಷ ಜನರಿಗೆ ಲಾಕ್‍ಡೌನ್ ಸಮಯದಲ್ಲಿ ಆಹಾರದ ಪಾಕೇಟ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ಇದೆ. ಸುಮಾರು 5 ಲಕ್ಷ ಕಾರ್ಮಿಕರನ್ನು ರೈಲು ಮತ್ತು ಬಸ್ಸುಗಳಲ್ಲಿ ಆಹಾರದ ಪೊಟ್ಟಣಗಳನ್ನು ನೀಡಿ ಅವರ ಸ್ವಂತ ಊರುಗಳಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ಇದೆ. 2.80 ಲಕ್ಷ ಆಹಾರದ ಕಿಟ್‍ಗಳನ್ನು ವಿವಿಧ ಕ್ಷೇತ್ರಗಳ ಶಾಸಕರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಇವುಗಳಿಗೆ ಖರ್ಚಾದ ಹಣ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ನಮಗಿರುವ ಮಾಹಿತಿ ಪ್ರಕಾರ, ವಿವಿಧ ಕಂಪನಿಗಳು ಮತ್ತು ಸೇವಾ ಸಂಸ್ಥೆಗಳವರು ನೀಡಿದ ಆಹಾರ ಮತ್ತು ಆಹಾರದ ಕಿಟ್‍ಗಳನ್ನು ತಾವು ನೀಡಿದ್ದೇವೆ ಎಂದು ಲೆಕ್ಕ ಬರೆದು ಹಣ ದೋಚಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳು ಖರ್ಚು ಮಾಡಿರುವ ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸರ್ಕಾರದ ಕಡತ ಸಂಖ್ಯೆ ಎಂಇಡಿ-52, ಆರ್‍ಜಿಯು-2020ರ ಕಂಡಿಕೆ, 36 ರಲ್ಲಿ ಪ್ರಸ್ತಾಪಿಸಿರುವಂತೆ 815 ಕೋಟಿಯ ದುಪ್ಪಟ್ಟು ದರಗಳಿಗೆ ಖರೀದಿಸಿರುವ ಮಾಹಿತಿ ಇದೆ. ಇದರಲ್ಲಿ ಅಧಿಕಾರಿಗಳೇ ಟಿಪ್ಪಣಿ ಬರೆದಿರುವಂತೆ ದುಪ್ಪಟ್ಟು ದರಗಳನ್ನು ಉಪಕರಣಗಳ ಖರೀದಿಗೆ ನಮೂದು ಮಾಡಲಾಗಿದೆ. (ಅನೆಕ್ಸ್-5)

ವೆಂಟಿಲೇಟರ್
ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿರುವ 323 ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಿರುವ ವೆಂಟಿಲೇಟರ್‍ಗಳ ಕುರಿತಾದ ಮಾಹಿತಿಯನ್ನೇ ನೋಡಿದರೆ ಇವರು ಜನರಿಗೆ ಯಾವ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. sಕೇಂದ್ರ ಸರ್ಕಾರ ಸುಮಾರು 50 ಸಾವಿರ ವೆಂಟಿಲೇಟರ್‍ಗಳನ್ನು ಪಿಎಂ ಕೇರ್ಸ್ ನಿಧಿಯಿಂದ ತಲಾ 4 ಲಕ್ಷ ರೂ.ಗಳಂತೆ ಒಟ್ಟು 2 ಸಾವಿರ ಕೋಟಿ ರೂ.ಗಳಲ್ಲಿ ಖರೀದಿ ಮಾಡಿ ಸರಬರಾಜು ಮಾಡುತ್ತಿದೆ. (ಅನೆಕ್ಸ್-6)

ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗಳಿಗೆ 100 ವೆಂಟಿಲೇಟರ್‍ಗಳನ್ನು ಖರೀದಿಸಿದೆ. (ಅನೆಕ್ಸ್-7)

ಸಂಪನ್ಮೂಲಗಳೂ ಇಲ್ಲದೇ ಪರದಾಡುತ್ತಿರುವ ರಾಜ್ಯ ಸರ್ಕಾರವು ಕನಿಷ್ಠ 5.6 ಲಕ್ಷ ರೂ.ಗಳಿಂದ 18.20 ಲಕ್ಷ ರೂ.ಗಳವರೆಗೆ ಹಣ ಕೊಟ್ಟು ಖರೀದಿ ಮಾಡಿದೆ. (ಅನೆಕ್ಸ್-8).
ಖರೀದಿ ಮಾಡಿರುವ ವೆಂಟಿಲೇಟರ್‍ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಮತ್ತು ಅವುಗಳನ್ನು ಈಗಾಗಲೇ ಬಳಸಲಾಗಿದೆ.

ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಮಾಜಿ ಶಾಸಕರಾದ ಡಾ|| ಸಾರ್ವಭೌಮ ಬಗಲಿಯವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.. ಸದರಿಯವರು ವೃತ್ತಿಯಲ್ಲಿ ವೈದ್ಯರೂ ಆಗಿದ್ದವರು.

ಮಾರುಕಟ್ಟೆ ದರಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಗಳಿಗೆ ಉಪಕರಣಗಳನ್ನು ಖರೀದಿ ಮಾಡಿ ಭ್ರಷ್ಟಾಚಾರ ಎಸಗಿರುವುದು ಒಂದು ಮಾದರಿಯಾದರೆ ಈಗಾಗಲೇ ಬೇರೆ ಬೇರೆ ಕಡೆ ಉಪಯೋಗಿಸಿ ನಿರುಪಯುಕ್ತವಾದ ವೆಂಟಿಲೇಟರ್‍ಗಳಂಥ ಸಾಮಗ್ರಿಗಳನ್ನು ಖರೀದಿ ಮಾಡಿರುವುದು. ಇದು ರಾಜ್ಯದ ಜನರಿಗೆ ಮಾಡಿರುವ ದ್ರೋಹ ಅಲ್ಲವೇ ? ಬಿ.ಜೆ.ಪಿ ಯವರ ಭ್ರಷ್ಟಚಾರದ ಹೊಸ ಅವತಾರ ಇದು.

ಪಿಪಿಇ ಕಿಟ್
ಆರೋಗ್ಯ ಸಚಿವರ ಪ್ರಕಾರ, 9.65 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎಂಬ ಕಂಪನಿಯೊಂದರಿಂದ ಸುಮಾರು 3.50 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಿದ್ದಾರೆ. ಇವುಗಳು ಕಳಪೆ ದರ್ಜೆಯವು ಎಂದು ರಾಜ್ಯಾದ್ಯಂತ ತೀವ್ರ ಆರೋಪ ಬಂತು. ಅನೇಕ ಕಡೆ ವೈದ್ಯರು ಪ್ರತಿಭಟನೆಯನ್ನೂ ಮಾಡಿದರು.

ದೂರುಗಳು ಬಂದ ಬಳಿಕ 1.25 ಲಕ್ಷ ಪಿಪಿಇ ಕಿಟ್‍ಗಳನ್ನು ಸರ್ಕಾರ ವಾಪಸ್ ಪಡೆಯಿತು. ಉಳಿದವುಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಅಪರ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ. ಸದರಿ ಕಂಪನಿಯಿಂದ 2-4.2020ರಂದು ಸುಮಾರು 1 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ. ಪಾವತಿಸಿರುವ ದರ ಕಿಟ್ ಒಂದಕ್ಕೆ 2,117.53 ರೂ.ಗಳು. ಇದೇ ಕಂಪನಿಗೆ 330 ರೂ.ಗಳನ್ನು ನೀಡಿಯೂ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. (ಆಯುಕ್ತರಿಗೆ ಬರೆದಿರುವ ಪತ್ರ : ಅನೆಕ್ಸ್-09)

ಡಾ. ಸಾರ್ವಭೌಮ ಬಗಲಿಯವರು ಮಾಜಿ ಶಾಸಕರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಕಳಪೆ ಕಿಟ್‍ಗಳನ್ನು ದುಬಾರಿ ದರಕ್ಕೆ ಖರೀದಿ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಕಳಪೆ ಗುಣಮಟ್ಟದ 2.25 ಲಕ್ಷ ಪಿಪಿಇ ಕಿಟ್‍ಗಳನ್ನು ವೈದ್ಯರು ಮತ್ತು ಅರೆ ವೈದ್ಯ ಸಿಬ್ಬಂದಿಗೆ ಅವರಲ್ಲಿ ಅನೇಕರು ಸೋಂಕಿಗೆ ಒಳಪಟ್ಟು ಅನಾಹುತಗಳಿಗೆ ಈಡಾಗಿದ್ದಾರೆ ಅದರ ಜವಾಬ್ದಾರಿ ಹೊರುವವರು ಯಾರು? ಬಳ್ಳಾರಿ ವಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1200 ರೂ.ಗಳ ವರೆಗೆ ನೀಡಿ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ.(ಅನೆಕ್ಸ್-10)

ಇಲಾಖೆಯ ಒಳಗಿನ ಮಾಹಿತಿ ಪ್ರಕಾರ, ಇವರು ಹೇಳುತ್ತಿರುವಷ್ಟು ಪಿಪಿಇ ಕಿಟ್‍ಗಳೇ ಇಲ್ಲ. ಆದರೂ ಹಣ ಪಾವತಿಸಲಾಗಿದೆ ಎಂಬ ಮಾಹಿತಿ ಇದೆ.

ಮಾಸ್ಕ್
ಮಾಸ್ಕ್ ದರ ಮಾರುಕಟ್ಟೆಯಲ್ಲಿ 50-60 ರೂ. ಇದ್ದರೂ ಸುಮಾರು ಹತ್ತು ಲಕ್ಷ ಮಾಸ್ಕ್‍ಗಳನ್ನು 126 ರೂ.ಗಳಿಂದ 150 ರೂ.ಗಳ ವರೆಗೆ ಖರೀದಿ ಮಾಡಲಾಗಿದೆ. ಇದರಲ್ಲಿ ನಿಯಮಬಾಹಿರವಾಗಿ ಹಾಗೂ ಕಳಪೆ ಗುಣಮಟ್ಟದ ಮಾಸ್ಕ್‍ಗಳನ್ನು ಖರೀದಿ ಮಾಡಲಾಗಿದೆ ಎಂದು ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ

ಥರ್ಮಲ್ ಸ್ಕ್ಯಾನರ್
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಥರ್ಮಲ್ ಸ್ಕ್ಯಾನರ್‍ಗಳು ಸುಮಾರು 2 ರಿಂದ 3 ಸಾವಿರ ರೂ.ಗಳಿದ್ದರೂ ಸರ್ಕಾರದ ಆರೋಗ್ಯ ಇಲಾಖೆ 5945 ರೂ.ಗಳನ್ನು ನೀಡಿ ಖರೀದಿಸಿದೆ. ಇದೇ ಥರ್ಮಲ್ ಸ್ಕ್ಯಾನರ್‍ಗಳನ್ನು ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂ.ಗಳನ್ನು ನೀಡಿ ಖರೀದಿಸಿದೆ. (ಅನೆಕ್ಸ್ 11).

ಸ್ಯಾನಿಟೈಸರ್ಸ್
500 ಎಂಎಲ್ ಸ್ಯಾನಿಟೈಸರ್‍ಗೆ ಮಾರುಕಟ್ಟೆಯಲ್ಲಿ 80-100 ಗಳಿದ್ದು ಇದಕ್ಕೆ 250 ರೂ. ನೀಡಿ ಖರೀದಿಸಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯವರು ಇದೇ 500 ಎಂಎಲ್ ಬಾಟಲಿಗೆ 600 ರೂ.ಗಳನ್ನು ನೀಡಿದೆ. (ಅನೆಕ್ಸ್ : 12).

ಆಕ್ಸಿಜನ್ ಉಪಕರಣ:-
ಪಕ್ಕದ ಕೇರಳ ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳವೆ ಮೂಲಕ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳನ್ನು [ ಹೆಚ್.ಎಫ್.ಎನ್.ಸಿ. ಥೆರಪಿ ಡಿವೈಸ್] ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ 300 ಡಿವೈಸ್ ಗಳ ದರ ಮತ್ತು ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಖರೀದಿಸಿರುವ ದರದ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಕೇರಳದಲ್ಲಿ 2,86,961.18 ರೂಗಳಿಗೆ ಖರೀದಿಸಿದೆ. ಕರ್ನಾಟಕದಲ್ಲಿ 4,36,800 ರೂ.ಗಳಿಗೆ ಖರೀದಿಸಿದೆ. (ಅನೇಕ್ಸ್-13)

ಎಸ್.ಎಂ. ಫಾರ್ಮಸ್ಯುಟಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಕಲಬುರ್ಗಿ ಮತ್ತು ರಾಮನಗರ ಜಿಲ್ಲೆಗಳಿಗೆ ಮನುಷ್ಯರ ಆರೋಗ್ಯಕ್ಕೆ ಹಾನಿಕರವಾದ ಅತ್ಯಂತ ಕಳಪೆ ಗುಣಮಟ್ಟದ ಸ್ಯಾನಿಟೈಸರ್‍ಗಳನ್ನು ಸರಬರಾಜು ಮಾಡಿದ್ದಾರೆ ಎಂದು ಸರ್ಕಾರದ ಇಲಾಖೆ ಪರೀಕ್ಷಾ ವರದಿಯಲ್ಲಿ ನಮೂದಿಸಿದೆ. (ಅನೆಕ್ಸ್-14).

ಇದು ಒಂದೆಡೆಯಾದರೆ ಕೇಂದ್ರ ಸರ್ಕಾರ ಸ್ಯಾನಿಟೈಸರ್‍ಗಳ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಿ ಸಂಕಷ್ಟ ಸಮಯದಲ್ಲೂ ಜನರನ್ನು ಶೋಷಿಸಲು ಯತ್ನಿಸುತ್ತಿದೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸರ್ಕಾರ, ಸ್ಯಾನಿಟೈಸರ್‍ಗಳನ್ನು ಖರೀದಿ ಮಾಡಿದ್ದಕ್ಕಿಂತ ಸಿಎಸ್‍ಆರ್‍ನಲ್ಲಿ ದೇಣಿಗೆ ನೀಡಿರುವ ಪ್ರಮಾಣವೇ ಹೆಚ್ಚಾಗಿದೆ.

ಆವರು ನೀಡಿರುವ ಸಾಮಗ್ರಿಗಳನ್ನು ಸರ್ಕಾರ ಲೆಕ್ಕ ಬರೆದು ಹಣ ದೋಚಿದೆ ಎಂಬ ಮಾಹಿತಿ ಇದೆ.
ಅಕ್ಸಿಜನ್ ಸಿಲಿಂಡರ್‍ಗಳು, ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಹಾಸಿಗೆ, ದಿಂಬು ಬಾಡಿಗೆ/ಖರೀದಿ ಕಿಯಾಸ್ಕ್‍ಗಳ ನಿರ್ಮಾಣ, ಹಾಲು, ಆಹಾರ ವಿತರಣೆ ಇತ್ಯಾದಿಗಳ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಯಾವ ಕಾರಣದಿಂದಲೋ ಏನೋ ಪ್ರಸ್ತಾಪ ಮಾಡಿಲ್ಲ.

ಈ ಎಲ್ಲ ಅಂಕಿ-ಅಂಶಗಳನ್ನು ನೋಡಿದರೆ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದು ಅರ್ಥವಾಗುತ್ತದೆ.

ಕೊರೊನಾ ವೈರಸ್ ರಾಜ್ಯದಲ್ಲಿ ತಾಂಡವ ನೃತ್ಯವಾಡುತ್ತಿದ್ದರೂ ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬ ರೀತಿಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಕಾಣುತ್ತಿದೆ.

ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರವನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನಡೆಸಿವೆ. ಈ ಮೂಲಕ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಈ ಭ್ರಷ್ಟಾಚಾರದ ಲೆಕ್ಕ ಕೊಡಿ ಎಂದು ಆಗ್ರಹಿಸುತ್ತಾ ಬಂದಿದ್ದೇವೆ.

ಮೇಲಿನ ಅಂಶಗಳನ್ನು ಗಮನಿಸಿದರೆ
ಸರಬರಾಜು ಆಗಿರುವ ಸಾಮಗ್ರಿಗಳು ಕಳಪೆಯಾಗಿವೆ,
ವಸ್ತುಗಳು ಸರಬರಾಜು ಆಗದೆ ಹಣ ಪಾವತಿಸಲಾಗಿದೆ,
ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದರೂ ದುಬಾರಿ ದರಗಳನ್ನು ನೀಡಲಾಗಿದೆ.
ಸಚಿವರು ಅಷ್ಟು ಹಣವೇ ಇಲ್ಲ, ಖರ್ಚು ಮಾಡಿಯೇ ಇಲ್ಲ ಎಂದಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ಖರ್ಚು ಮಾಡಿರುವ ಒಟ್ಟು ಪ್ರಮಾಣ 3,500 ಕೋಟಿ ರೂ.ಗಳು. ಇದು ಸರ್ಕಾರದ ಅಧಿಕೃತ ಮಾಹಿತಿ. ಬಿಡುಗಡೆ ಮಾಡಿರುವುದು 1527 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕಿಂತ ಶೇ.217 ರಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ.

ಇದರ ಜೊತೆಗೆ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 133 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದು ಒಂದು ಇಲಾಖೆಯ ಮಾಹಿತಿ ಮಾತ್ರ.
ಸಂಪನ್ಮೂಲಗಳ ಕೊರತೆಯ ನೆಪದಲ್ಲಿ ಸರ್ಕಾರದ ಆಸ್ತಿ ಹರಾಜು ಹಾಕುತ್ತಿದ್ದಾರೆ.

ಗುತ್ತಿಗೆಗೆ ನೀಡಿರುವ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ, 8 ಸಾವಿರ ಕೋಟಿ ರೂ. ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ.

ಈ ಹಣವನ್ನು ಸದ್ಭಳಕೆ ಮಾಡಿಕೊಂಡು ಜನರ ಆರೋಗ್ಯ ಸುಧಾರಿಸುವ ಬದಲು ನಿರಂತರವಾಗಿ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ನಾಲ್ಕು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ವೆಚ್ಚ ಮಾಡಿದೆ.

ಈ ವೆಚ್ಚದಲ್ಲಿ 2000 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡು ಮಂತ್ರಿಗಳು, ಅಧಿಕಾರಿಗಳು ಜೇಬು ತುಂಬಿಸಿಕೊಂಡಿದ್ದಾರೆ. ವಲಸೆ ಕಾರ್ಮಿಕರು, ಬಡವರಿಗೆ ಆಹಾರ ಕಿಟ್ ನೀಡುವುದಕ್ಕೆ ವೆಚ್ಚ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಪ್ರಕರಣಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುತ್ತದೆ.
ಈ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಬೇಕೆಂದು ಒತ್ತಾಯಿಸುತ್ತೇವೆ.

ಹಗರಣದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ಭ್ರಷ್ಟರಿಗೆ ಶಿಕ್ಷೆ ನೀಡುವ ದೃಷ್ಟಿಯಿಂದ ಕೂಡಲೇ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ.

ಪ್ರಸ್ತುತ ರಾಜ್ಯ ಸರ್ಕಾರವು ಇತಿಹಾಸದಲ್ಲೇ ಅತ್ಯಂತ ಹೆಚ್ಚು ಭ್ರಷ್ಟ ಸರ್ಕಾರವಾಗಿದೆ. ಕೋವಿಡ್ ನಿಯಂತ್ರಣದಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕಿತರಿಗೆ ಸಮರ್ಥ ಚಿಕಿತ್ಸೆಯನ್ನೂ ನೀಡದೆ ಅವರನ್ನು ಕೊಲ್ಲುತ್ತಿರುವ ಸರ್ಕಾರ ಇದಾಗಿದೆ. ಮಡಿದವರಿಗೆ ಗೌರವಯುತವಾದ ಶವ ಸಂಸ್ಕಾರವನ್ನೂ ನಡೆಸದೆ ಮಾನವ ಹಕ್ಕುಗಳ ದಮನಕ್ಕೂ ಕಾರಣವಾಗಿದೆ.

ಇದು ಭ್ರಷ್ಟ ಸರ್ಕಾರ, ಅಷ್ಟೇ ಅಲ್ಲ, ಅಮಾನವೀಯವಾದ ಸರ್ಕಾರವೂ ಆಗಿದೆ.

ಕೊರೋನಾ ಸೋಂಕಿತರ ಹೆಣದ ಮೇಲೆ ಸರ್ಕಾರ ಹಣ ಮಾಡಲು ಮುಂದಾಗಿದೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು:ಕೋವಿಡ್ 19ರ ಪಿಡುಗನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಜನರನ್ನು ರಕ್ಷಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೋನಾ ಸೋಂಕಿತರ ಹೆಣದ ಮೇಲೆ ಹಣ ಮಾಡಲು ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಕುರಿತು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:

‘ನಮ್ಮ ವಿರೋಧ ಪಕ್ಷದ ನಾಯಕರು ಲೆಕ್ಕ ಕೊಡಿ ಅಂತಾ ಕೇಳಿದ್ದಾರೆ. ನಾನು ಉತ್ತರ ಕೊಡಿ ಅಂತಾ ಕೇಳಿದ್ದೇನೆ. ಸರ್ಕಾರ ಜನರಿಗಾಗಿ ಮಾಡಿರುವ ಖರ್ಚಿನ ಲೆಕ್ಕ ಕೇಳಿದ್ದಾರೆ. ಈಗಾಗರಲೇ ಸರ್ಕಾರ 4 ಸಾವಿರ ಕೋಟಿ ರು. ಖರ್ಚು ಮಾಡಿದ್ದು, ಅದರಲ್ಲಿ 2 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇಡೀ ಕಾಂಗ್ರೆಸ್ ಒಮ್ಮತದಿಂದ ಇದನ್ನು ಅನುಮೋದಿಸುತ್ತದೆ.

ಮುಖ್ಯಮಂತ್ರಿಗಳು ನಾವೆಲ್ಲ ಸಹಕಾರ ನೀಡಬೇಕು ಅಂತಾ ಕೇಳಿದ್ದಾರೆ. ಕೋವಿಡ್ ವಿಚಾರದಲ್ಲಿ ನಾವು ನಿಮಗೆ ಯಾವಾಗ ಸಹಕಾರ ಕೊಟ್ಟಿಲ್ಲ ಹೇಳಿ? ಪಕ್ಷವನ್ನು ಮರೆತು ಜನರ ಜೀವನ, ಜನರ ಬದುಕಿಗಾಗಿ ನಾವು ಎಲ್ಲ ಹಂತದಲ್ಲೂ ಸಹಕಾರ ನೀಡಿದ್ದೇವೆ. ಕೇವಲ ನಾಲ್ಕು ಗಂಟೆ ಅಂತರದಲ್ಲಿ ಲಾಕ್ ಡೌನ್ ಮಾಡಿದಿರಿ. ನಾವು 120 ದಿನ ಅದಕ್ಕೆ ಸಹಕಾರ ಕೊಟ್ಟಿದ್ದೇವೆ. ಆದರೆ ನೀವು ಕೊರೋನಾ ಪರಿಸ್ಥಿತಿಯಲ್ಲಿ ಹೆಣದ ಮೇಲೆ ಹಣ ಮಾಡಲು ಹೊರಟಿದ್ದೀರಲ್ಲಾ, ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೇ ಮುಖ್ಯಮಂತ್ರಿಗಳೇ?

ಬೆಂಗಳೂರು ನಗರಕ್ಕೆ ನಿಮ್ಮ 8 ಸಚಿವರುಗಳು ಅಂದರೆ ಅಷ್ಟದಿಕ್ಪಾಲಕರು, ಜತೆಗೆ ಮತ್ತೊಬ್ಬರು. ಒಟ್ಟು ಒಂಬತ್ತು ಜನ. ಇವರೆಲ್ಲ ಸೇರಿ ಬೆಂಗಳೂರನ್ನ ಏನು ಮಾಡುತ್ತಿದ್ದಾರೆ? ಒಬ್ಬ ಮಂತ್ರಿ ಒಂದು ಆಸ್ಪತ್ರೆಗೆ ಹೋಗಿ ಅಲ್ಲಿ ರೋಗಿಯ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಲಿಲ್ಲ. ಒಬ್ಬ ವೈದ್ಯರಿಗೆ ಆತ್ಮಸ್ಥೈರ್ಯ ತುಂಬಲಿಲ್ಲ. ಸೋಂಕಿತರು ತಾವೇ ಕಾಯಿಲೆ ತಂದುಕೊಂಡರೇ? ನೀವು ಅವರಿಗೆ ಕಾಯಿಲೆ ತಂದಿರಿ.

ಹೆಣಗಳನ್ನು ಯಾವ ರೀತಿ ಸಂಸ್ಕಾರ ಮಾಡಿದಿರಿ? ಈ ದೇಶದ ಆಸ್ತಿ ಸಂಸ್ಕೃತಿ. ಇದೇನಾ ನಿಮ್ಮ ಸಂಸ್ಕೃತಿ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಸೋಂಕು ಹಂಚಿದ್ದಲ್ಲದೇ ಭ್ರಷ್ಟಾಚಾರವನ್ನು ಹಂಚಿದೆ. ಈ ಸರ್ಕಾರಕ್ಕೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು, ಯುವಕರ ಸಮಸ್ಯೆ, ಮಕ್ಕಳ ಸ್ಥಿತಿ, ಆರ್ಥಿಕವಾಗಿ ಹೇಗೆ ರಾಜ್ಯವನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಒಂದು ಸ್ಪಷ್ಟ ದೂರದೃಷ್ಟಿ ಇಲ್ಲವಾಗಿದೆ. ಈ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ, ಇರುವುದೆಲ್ಲ ಬರೀ ಭ್ರಷ್ಟಾಚಾರದ ದೃಷ್ಟಿ.

ಆಹಾರ ಕಿಟ್ ಮೇಲೆ, ಬಾಣಂತಿಯರು, ಮಕ್ಕಳ ಆಹಾರ ಪ್ಯಾಕ್ ಮೇಲೆ ನಿಮ್ಮ ನಾಯಕರ ಫೋಟೋ ಹಾಕಿ ಅಕ್ರಮ ಮಾಡಿದರಲ್ಲ, ಅವರ ವಿರುದ್ಧ ಒಂದು ಕೇಸ್ ಹಾಕಿದ್ದೀರಾ? ಒಬ್ಬರನ್ನಾದರೂ ಬಂಧಿಸಿದ್ದೀರಾ? ಆದರೂ ನಮ್ಮ ಸಹಕಾರ ಕೇಳುತ್ತಿದ್ದೀರಿ, ನಿಮಗೆ ನಾಚಿಕೆಯಾಗುವುದಿಲ್ಲವೇ?

ಕಾರ್ಮಿಕರಿಗೆ ನೀವು 1200 ರೂಪಾಯಿಯ ಊಟ ಕೊಟ್ಟಿರುವುದಾಗಿ ಹೇಳುತ್ತೀರಲ್ಲಾ, ಯಾವ ಪಂಚತಾರಾ ಹೋಟೆಲ್ ನಿಂದ ತಂದು ಊಟ ಕೊಟ್ಟಿದ್ದೀರಿ ಅವರಿಗೆ? ಎಷ್ಟು ಜನಕ್ಕೆ ಊಟ, ಮಾಸ್ಕ್, ಆಹಾರ ಕಿಟ್ ಕೊಟ್ಟಿದ್ದೀರಾ ಅಂತಾ ನೀವು ಲೆಕ್ಕ ಇಟ್ಟಿದ್ದೀರಾ? ಬರೀ ಲೂಟಿ ಮಾಡುವುದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಕಾರ್ಮಿಕರನ್ನು ನೀವು ನಡೆಸಿಕೊಂಡ ರೀತಿ ಹೇಗಿತ್ತು? ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರಾ?

ಇಡೀ ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆರಂಭದ ಮೂರು ತಿಂಗಳುಗಳ ಒಂದು ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡಲಿಲ್ಲ. ಪ್ರಕರಣ ಹೆಚ್ಚಾದ ಮೇಲೆ ಅವರನ್ನು ಕರೆದು ಮಾತನಾಡುತ್ತಿದ್ದೀರಿ. ಈಗ ನಿಮಗೆ ಕಾನೂನಿನ ಅರಿವಾಗಿ ಅವರನ್ನು ಬೆದರಿಸುತ್ತಿದ್ದೀರಿ. ಸರ್ವಪಕ್ಷ ಸಭೆಯಲ್ಲೇ ಖಾಸಗಿ ಆಸ್ಪತ್ರೆಗಳ ಜತೆ ಮಾತನಾಡಿ ಎಂದು ನಾವು ಹೇಳಿರಲಿಲ್ಲವೇ?

ಸರಿಯಾದ ತನಿಖೆ ಅಥವಾ ಮಾಹಿತಿ ಇಲ್ಲದೇ ಮಾಧ್ಯಮಗಳು ವರದಿ ಪ್ರಕಟಿಸುವುದಿಲ್ಲ. ಕೊರೊನಾ ರೋಗಕ್ಕಿಂತ ರಾಜ್ಯಕ್ಕೆ ಬಿಜೆಪಿ ಭ್ರಷ್ಟಾಚಾರವೇ ದೊಡ್ಡ ರೋಗವಾಗಿದೆ. ರಾಜ್ಯದ ಪಾಲಿಗೆ ಬಿಜೆಪಿ ಸರ್ಕಾರ ದೊಡ್ಡ ಶಾಪವಾಗಿದೆ.

ಮುಖ್ಯಮಂತ್ರಿಗಳು ಲಾಕ್ ಡೌನ್ ಬೇಕಾಗಿಲ್ಲ ಅಂತಾ ಹೇಳುತ್ತಿದ್ದಾರೆ. ಮತ್ಯಾಕೆ ಲಾಕ್ ಡೌನ್ ಮಾಡಿದ್ರಿ? ಲಾಕ್ ಡೌನ್ ಮಾಡಿ ಯಾವ ತಯಾರಿ ಮಾಡಿಕೊಂಡಿರಿ? ನಿಮ್ಮ ಕಾರ್ಯಯೋಜನೆ ಏನು? ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ಕಾರ್ಯತಂತ್ರ ಮಾಡುತ್ತೀರಿ ಅಂತಾ ಇಂದಿನವರೆಗೂ ಹೇಳಿಲ್ಲ. ಸರ್ಕಾರದ ನೀತಿಗಳು ನಿಶ್ಯಕ್ತವಾಗಿವೆ.

ಸರ್ಕಾರಿ ಸಿಬ್ಬಂದಿಗೆ ವೇತನ ನೀಡಿಲ್ಲ. ಕೋಟ್ಯಂತರ ರೂಪಾಯಿ ಸಾಲ ತೆಗೆದುಕೊಂಡಿದ್ದೀರಿ. ಹಾಗಾದ್ರೆ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರು. ಪ್ಯಾಕೇಜ್ ಏನಾಯ್ತು? ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು? ನೀವು 1600 ಕೋಟಿ ಪ್ಯಾಕೇಜ್ ಘೋಷಿಸಿದರಲ್ಲಾ ಯಾರಿಗೆ ಎಷ್ಟು ಕೊಟ್ಟಿರಿ? ಲೆಕ್ಕ ಕೊಡಿ. ಎಲ್ಲವನ್ನು ಸಾರ್ವಜನಿಕವಾಗಿ ತಿಳಿಸಿ.

ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಮಾಧ್ಯಮಗಳಿಗೆ, ರಾಜ್ಯದ ಜನರಿಗೆ, ಕಾರ್ಮಿಕರಿಗೆ ಉತ್ತರ ನೀಡಲಿ. ಉದ್ಯಮಿಗಳು, ಹೋಟೆಲ್ ಉದ್ಯಮಕ್ಕೆ ನೀವು ನಯಾಪೈಸೆ ಸಹಾಯ ನೀಡಿದ್ದೀರಾ? ಬೆಂಗಳೂರಿನಲ್ಲೇ 11 ಸಾವಿರ ಹೋಟೆಲ್ ಗಳಿವೆ. ನೀವು 3 ತಿಂಗಳು ಬಾಗಿಲು ಮುಚ್ಚಿಸಿದ್ದರಿಂದ ಇವರಿಗಾದ ನಷ್ಟದಿಂದ ಚೇತರಿಸಿಕೊಳ್ಳಲು ಅವರಿಗೆ ಇನೇಷ್ಟು ಕಾಲ ಬೇಕೋ ಗೊತ್ತಿಲ್ಲ.

ಸಿದ್ದರಾಮಯ್ಯ ಅವರಿಗೆ ಬಂದು ಲೆಕ್ಕ ನೋಡಿ ಅಂತಿರಲ್ಲಾ, ಸಾರ್ವಜನಿಕ ಲೆಕ್ಕ ಸಮಿತಿಯಲ್ಲಿ ಎಲ್ಲ ಪಕ್ಷದವರೂ ಇದ್ದಾರೆ ತಾನೆ? ಅವರು ಈ ಬಗ್ಗೆ ಪರಿಶೀಲಿಸಲು ಅವಕಾಶ ನೀಡಿ. ನೀವು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿದ್ದರೆ ಇವರಿಗೆ ತನಿಖೆಗೆ ಅವಕಾಶ ನೀಡಿ.

ಆಶಾ ಕಾರ್ಯಕರ್ತೆಯರು 16 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದು, ಅವರನ್ನು ಕರೆದು ಮಾತನಾಡಿಸಲು ನಿಮಗೆ ಸಾಧ್ಯವಾಗಿಲ್ಲವಲ್ಲ. ಇವರಿಗೆ 3 ಸಾವಿರ ರು. ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಿರಿ, 42 ಸಾವಿರ ಆಶಾ ಕಾರ್ಯಕರ್ತರಲ್ಲಿ ಶೇ.10 ರಷ್ಟು ಮಂದಿಗೆ ಪರಿಹಾರ ಕೊಟ್ಟಿಲ್ಲ. ಮೂರು ತಿಂಗಳು ಇವರು ತಮ್ಮ ಪ್ರಾಣ ಪಣಕ್ಕಿಟ್ಟು ಮನೆ ಮನೆಗೆ ಹೋಗಿ ನಿಮಗೆ ಮಾಹಿತಿ ಸಂಗ್ರಹಿಸಿಕೊಟ್ಟಿದ್ದರಲ್ಲ. ಅವರಿಗೆ ಚೆಕ್ ಬರೆದು ಕೊಡಲು ಏನು ಸಮಸ್ಯೆ? ಪೌರ ಕಾರ್ಮಿಕರಿಗೆ ವಿಮೆ ಕೊಟ್ಟಿದ್ದೀರಾ? ರೈತರಿಗೆ ಯಾವ ಮಾರುಕಟ್ಟೆ ಒದಗಿಸಿಕೊಟ್ಟಿರಿ? ಎಷ್ಟು ಬೆಳೆ ಖರೀದಿಸಿದಿರಿ? ಯಾರಿಗೆ ಕೊಟ್ಟಿದ್ದೀರಿ?

ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಗಳು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೆದ್ ಅಕ್ತರ್ ಅವರಿಗೆ ಬಿಟ್ಟರು. ಹಾಗಿದ್ದರೆ ಅಖ್ತರ್ ಅವರೇ ಪತ್ರಿಕಾಗೋಷ್ಠಿ ನಡೆಸಬಹುದಿತ್ತಲ್ಲವೇ? ನೀವು ವಿದ್ಯಾವಂತರಲ್ಲವೇ ನಿಮಗೆ ಟೆಕ್ನಿಕಲ್ ವಿಚಾರ ಗೊತ್ತಿಲ್ಲವೇ? ಕಾರ್ಯದರ್ಶಿಗಳು ಪ್ರಶ್ನೆ ಎದುರಿಸುವುದಾದರೇ ನೀವು ಮಂತ್ರಿ ಆಗಿ ಯಾಕಿದ್ದೀರಿ?

ಹಾಸಿಗೆ ಬಾಡಿಗೆ ವಿಚಾರದಿಂದ ಹಿಡಿದು ಯಾವುದೇ ನಿರ್ಧಾರವನ್ನು ಮಂತ್ರಿಗಳು, ಸರ್ಕಾರದ ಅನುಮತಿ ಇಲ್ಲದೇ ಅಧಿಕಾರಿಗಳು ಮಾಡಲು ಸಾಧ್ಯವೇ? ಅಧಿಕಾರಿಗಳು ಖರೀದಿಸಲು ಸಾಧ್ಯವಾ? ಮಾಧ್ಯಮಗಳ ತನಿಖಾ ವರದಿ, ಅಧಿಕಾರಿಗಳು, ಮಂತ್ರಿಗಳ ದಾಖಲೆಗಳನ್ನು ಇಟ್ಟುಕೊಂಡು ನಾವಿಂದು ಮಾತನಾಡುತ್ತಿದ್ದೇವೆಯೇ ಹೊರತು, ನಮ್ಮ ಗ್ರಹಿಕೆಯಿಂದ ಅಲ್ಲ.

ಬಿಜೆಪಿ ಸರ್ಕಾರ 21 ದಿನಗಳಲ್ಲಿ ಕೊರೋನಾ ವಿರುದ್ಧದ ಯುದ್ಧ ಗೆಲ್ಲುತ್ತೇವೆ ಎಂದಿದ್ದರು. ನಾವು ಕೂಡ ಅವರಿಗೆ ಸಹಕಾರ ಕೊಟ್ಟಿದ್ದೇವೆ. 121 ದಿನವಾಗಿದೆ, ಆದರೆ ಪರಿಹಾರ ಸಿಕ್ಕಿದೆಯೇ? ಪಿಪಿಇ ಕಿಟ್, ವೆಂಟಲೇಟರ್ ಸೇರಿ ಎಲ್ಲದರಲ್ಲೂ ಹಣ ಮಾಡಿದ ಸರ್ಕಾರ, ಈಗ ಹೆಣದ ಹೆಸರಲ್ಲೂ ಹಣ ಮಾಡಲು ನಿಂತಿದೆ. ದೇಶದಲ್ಲೇ ಕರ್ನಾಟಕವನ್ನು ಕಪ್ಪು ಚುಕ್ಕೆಯನ್ನಾಗಿ ಮಾಡಿದ್ದಾರೆ. ನೀವು ಇಟ್ಟಿರುವ ಈ ಕಪ್ಪು ಚುಕ್ಕೆ ಕಳಚಲು ಇನ್ನು ಎಷ್ಟು ವರ್ಷ ಬೇಕಾಗುತ್ತದೊ ಗೊತ್ತಿಲ್ಲ.

ಸರ್ಕಾರ ರಚನೆಯಾಗಿ ಒಂದು ವರ್ಷದ ಪೂರೈಸಿದ ಸಂದರ್ಭವನ್ನು ಆಚರಿಸಲು ಮುಂದಾಗಿದ್ದೀರಿ. ಆಚರಿಸಿಕೊಳ್ಳಿ, ನಾವು ಪ್ರಶ್ನಿಸುವುದಿಲ್ಲ. ಆದರೆ ಸಂಕಷ್ಟದಲ್ಲಿ ಸಿಲುಕಿರುವ ಜನರ ಬಳಿ ಹೋಗಿ ಅವರ ಸಮಸ್ಯೆ ಆಲಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನೋಂದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ.’

ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಐಸಿಯು ಬೆಡ್

ಬೆಂಗಳೂರು: ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಐಸಿಯು ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರದ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ 4 ಹಾಸಿಗೆಗಳಿದ್ದು ಕೂಡಲೇ ಅವುಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಒಳಗೆ 50 ಹಾಸಿಗೆಗಳು ಹಾಗೂ ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ ಐಸಿಯುಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ಮಾಡ್ಯೂಲರ್ ಐಸಿಯುಗಳು ಒಂದು ರೀತಿಯಲ್ಲಿ ಮೊಬೈಲ್ ಐಸಿಯುಗಳಂತೆ ಇರುತ್ತವೆ. ಸರಕು ಸಾಗಾಣಿಕೆಗೆ ಬಳಸಲಾಗುವ ಕಂಟೈನರುಗಳಲ್ಲಿ ಇವುಗಳನ್ನು ಸುಧಾರಿತ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಸಿಬ್ಬಂದಿ ವ್ಯವಸ್ಥೆ:
ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು, ನರ್ಸುಗಳು ಸೇರಿ ಅರೆ ವೈದ್ಯಕೀಯ ಸಿಬ್ಬಂದಿಯ ಸಾಕಷ್ಟು ಕೊರತೆ ಇದೆ. ಆಂಬುಲೆನ್ಸ್’ಗಳ ಜತೆಗೆ ಅವುಗಳ ಚಾಲಕರ ಕೊರತೆಯೂ ಇದೆ ಎಂದು ವೈದ್ಯರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕೊರತೆಯನ್ನು ತಕ್ಷಣವೇ ನಿವಾರಿಸಲಾಗುವುದು. ಜತೆಗೆ, ಕೊರತೆ ಇರುವ ವೈದ್ಯಕೀಯ ಸಲಕರಣೆಗಳನ್ನೂ ಕೂಡಲೇ ಆಸ್ಪತ್ರೆಗೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಆಂಟಿಜನ್ ಕಿಟ್ಟುಗಳು ತೀವ್ರ ಕೊರತೆ ಇದ್ದು ಅವುಗಳನ್ನು ತಕ್ಷಣ ಪೂರೈಸಬೇಕು ಎಂದು ವೈದ್ಯರು ಮಾಡಿದ ಮನವಿಗೂ ಸ್ಪಂದಿಸಿದ ಡಿಸಿಎಂ, ನಿಮಗೆ ಎಷ್ಟು ಲಕ್ಷ ಕಿಟ್ಟುಗಳು ಬೇಕಾದರೂ ಪೂರೈಕೆ ಮಾಡುತ್ತೇವೆ. ಆ ಬಗ್ಗೆ ಚಿಂತೆ ಬಿಡಿ. ರೋಗಿಗಳ ಕಡೆ ಹೆಚ್ಚು ಗಮನ ಕೊಡಿ. ಕೋವಿಡ್ ರಹಿತ ರೋಗಿಗಳಿಗೂ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಿ ಎಂದು ಸೂಚಿಸಿದರು.