ಕೊರೋನಾದಿಂದ ದೇವರೇ ಕಾಪಾಡಬೇಕು: ಶ್ರೀರಾಮುಲು ಹೇಳಿಕೆಗೆ ಕೈ ನಾಯಕರ ಆಕ್ರೋಶ

ಬೆಂಗಳೂರು: ಕೊರೋನಾದಿಂದ ದೇವರೇ ಕಾಪಾಡಬೇಕು ಅನ್ನೋ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಧಿಕಾರಕ್ಕಾಗಿ ಬಿಜೆಪಿಯವರು ಏನೇನೋ ಮಾಡಿದ್ರು. ಈಗ ನಮ್ಮ ಕೈಲಿ ಆಗಲ್ಲ ಅಂತಾರೆ. ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಯಾಕಿರ್ಬೇಕು. ಒಂದು ಕ್ಷಣವೂ ವೇಸ್ಟ್ ಮಾಡದೆ ರಾಜೀನಾಮೆ ನೀಡಲಿ. ಗೌವರ್ನರ್ ರೂಲ್ ಬರಲಿ, ಅವರೇ ನಡೆಸ್ತಾರೆ. ಕೊರೋನಾ ಸಂದರ್ಭದಲ್ಲಿ ನಾವು ರಾಜಕೀಯ ಮಾಡಿಲ್ಲ ಸಂಪೂರ್ಣ ಸಹಕಾರ ನೀಡಿದ್ದೆವು. ಆದರೂ ಪರಿಸ್ಥಿತಿ ನಿಭಾಯಿಸೋಕೆ ಆಗಲ್ಲ ಅಂದ್ರೆ ಏನ್ಮಾಡ್ಬೇಕು ಅಂತಾ ಕಿಡಿಕಾರಿದ್ರು.

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೊನಾ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕಿದ್ದೀರಿ ಎಂದು ಸಚಿವ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಇಂದು ದಾಖಲೆಯ 4169 ಕರೋನಾ ಕೇಸ್: 51422 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು ಇಂದು ದಾಖಲೆಯ 4169 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ,104 ಸೋಂಕಿತರು ಒಂದೇ ದಿನ ಮೃತರಾಗುವ ಮೂಲಕ ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸಧ್ಯ 30655 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 51422 ಕ್ಕೆ ತಲುಪಿದೆ.1032 ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 539 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು‌1263 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 19729 ಆಗಿದೆ.

ಲಾಕ್‌ಡೌನ್ ಜಾರಿಯಾಗಿದ್ದರೂ ಬೆಂಗಳೂರಿನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಇಂದು ಒಂದೇ ದಿನ ನಗರದಲ್ಲಿ 2344 ಸೋಂಕಿತರು ಪತ್ತೆಯಾಗಿದ್ದಾರೆ, ಅರ್ಧಕ್ಕಿಂತ ಜಾಸ್ತಿ ಬೆಂಗಳೂರಲ್ಲೇ ಸೋಂಕಿತರು ಪತ್ತೆಯಾಗುತ್ತಿರುವುದು ಹೊಸ ಆತಂಕ ಸೃಷ್ಟಿಸಿದೆ.

ಜಿಲ್ಲಾವಾರು ಕೋವಿಡ್ ವಿವರ:

ಜನರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ: ಡಿ.ಕೆ ಶಿವಕುಮಾರ್

ಬೆಂಗಳೂರು:ಕೊರೋನಾ ಪಿಡುಗಿನಿಂದ ಜನರನ್ನು ಕಾಪಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಅಗ್ರಹಿಸಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ನಿನ್ನೆ ಕೊರೋನಾ ವಿಚಾರದಲ್ಲಿ ಜನರನ್ನು ದೇವರೇ ಕಾಪಾಡಬೇಕು ಎಂದು ನೀಡಿದ ಹೇಳಿಕೆಗೆ ಇಂದು ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ…

ಶ್ರೀರಾಮುಲು ಅವರ ಹೇಳಿಕೆಯಿಂದ ಇಡೀ ರಾಜ್ಯ ತಲ್ಲಣಗೊಂಡಿದೆ. ಅಧಿಕಾರಕ್ಕಾಗಿ ಬಹಳ ಶ್ರಮ ವಹಿಸಿ ಸರ್ಕಾರ ರಚನೆ ಮಾಡಿದರು. ಈಗ ಕೋವಿಡ್ ವಿಚಾರದಲ್ಲಿ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ ದೇವರೇ ಕಾಪಾಡಬೇಕು ಅಂತಾ ಮುಖ್ಯಮಂತ್ರಿಗಳ ತಂಡ ಹೇಳುತ್ತಿದೆ. ಇದು ಕೇವಲ ಶ್ರೀರಾಮುಲು ಅವರ ಹೇಳಿಕೆಯಲ್ಲ. ಅವರು ಸರ್ಕಾರದ ಧ್ವನಿಯಾಗಿ ಈ ಮಾತನ್ನು ಹೇಳಿದ್ದಾರೆ. ಈ ಹೇಳಿಕೆ ನೀಡಿದ ಮರುಕ್ಷಣದಿಂದಲೇ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಕೊರೋನಾ ವಿಚಾರದಲ್ಲಿ ಜನರನ್ನು ದೇವರು ಕಾಪಾಡಬೇಕಾದರೆ, ನೀವು ಯಾಕೆ ಅಧಿಕಾರದಲ್ಲಿ ಇರಬೇಕು. ಜನರನ್ನು ನಿಮ್ಮಿಂದ ರಕ್ಷಣೆ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ.

ಸರ್ಕಾರ ರಾಜೀನಾಮೆ ನೀಡಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿಗೊಳಿಸಿ. ಅಧಿಕಾರಿಗಳ ಮೂಲಕ ರಾಜ್ಯಪಾಲರೆ ಆಡಳಿತ ನಡೆಸಲಿ ಎಂದು ಒತ್ತಾಯಿಸುತ್ತೇನೆ. ನೀವು ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ವಿಫಲರಾಗಿದ್ದೀರಿ.

ಜನರು, ಪ್ರತಿಪಕ್ಷಗಳು ಎಲ್ಲ ರೀತಿಯ ಸಹಕಾರ ಕೊಟ್ಟ ನಂತರವೂ ನಿಮ್ಮ ಕೈಯಲ್ಲಿ ಆಗುವುದಿಲ್ಲ, ಎಲ್ಲ ದೇವರ ಕಥೆ ಎನ್ನುವುದಾದರೆ ಕೂಡಲೇ ಇಡೀ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವುದು ಉತ್ತಮ.

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ : ಸರ್ಕಾರದ ನಿರ್ಧಾರದ ಹಿಂದಿದೆ ಷಡ್ಯಂತ್ರ, ಇದು ಗಣಿ ಹಗರಣಕ್ಕಿಂತ ದೊಡ್ಡದು-ಸಿದ್ದರಾಮಯ್ಯ

ಬೆಂಗಳೂರು : ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಭಾರಿ ಷಡ್ಯಂತ್ರ ಅಡಗಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡದು. ಇದರಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಪಕ್ಷ ಬೃಹತ್ ಹೋರಾಟ ನಡೆಸಲಿದೆ. ಹಳ್ಳಿ ಮಟ್ಟದಿಂದ ಹೋರಾಟವನ್ನು ಸಂಘಟಿಸಲಾಗುವುದು. ಈ ಕುರಿತು ಬೇರೆ ಬೇರೆ ಪಕ್ಷಗಳು ಹಾಗೂ ರೈತ ಸಂಘಟನೆಗಳ ಜೊತೆಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕೊರೊನಾದಂಥ ಸಂಕಷ್ಟದ ಸಮಯವನ್ನು ದುರುಪಯೋಗಪಡಿಸಿಕೊಂಡು ಭೂ ಸುಧಾರಣೆ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು, ತಿದ್ದುಪಡಿ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದು :

ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಸರ್ಕಾರ ಈ ಸಂದರ್ಭವನ್ನು ಬಳಸಿಕೊಂಡು, ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ದಿನ ರಾಜ್ಯಕ್ಕೆ ಕರಾಳ ದಿನ. ಬಡವರು, ಕೂಲಿ-ಕಾರ್ಮಿಕರು, ಹಿಂದುಳಿದವರು ಹಾಗೂ ರೈತರ ವಿರೋಧಿ ತಿದ್ದುಪಡಿ ಇದಾಗಿದೆ.
ಭೂ ಸುಧಾರಣೆ ಕಾಯಿದೆಯ ಸೆಕ್ಷನ್ 63, ಸೆಕ್ಷನ್ 79ಎ, ಸೆಕ್ಷನ್ 79 ಬಿ, ಸೆಕ್ಷನ್ 79 ಸಿ, ಸೆಕ್ಷನ್ 80, ಇವುಗಳನ್ನು ಸೇರಿಸಿ ದೇವರಾಜ ಅರಸು ಅವರು ಪ್ರಗತಿಪರ, ಕ್ರಾಂತಿಕಾರಕ ಹಾಗೂ ಸಾಮಾಜಿಕ ನ್ಯಾಯದಿಂದ ಕೂಡಿದ ಮತ್ತು ಗೇಣಿದಾರರಾಗಿ ಉಳುಮೆ ಮಾಡುತ್ತಿದ್ದವರಿಗೆ ನ್ಯಾಯ ಒದಗಿಸುವ ತಿದ್ದುಪಡಿಯನ್ನು 1.3.1974ರಲ್ಲಿ ಜಾರಿಗೆ ತಂದಿದ್ದರು. ಅದು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 24 ಲಕ್ಷ ರೈತರಿಗೆ ಅನುಕೂಲವಾದ ಹಾಗೂ ಗೇಣಿ ಮಾಡುತ್ತಿದ್ದ ಜಮೀನುಗಳಿಗೆ ರೈತರು ಮಾಲೀಕರಾದ ದಿನ ಆದಾಗಿತ್ತು.
ಅರಸು ಅವರು ಜಾರಿಗೆ ತಂದ ಕಾಯಿದೆ ಪ್ರಕಾರ, ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳು, ಶ್ರೀಮಂತರು ಕೃಷಿ ಭೂಮಿ ಖರೀದಿ ಮಾಡುವಂತಿರಲಿಲ್ಲ. ಕೃಷಿ ಜಮೀನು ಖರೀದಿಸುವ ಸಂದರ್ಭದಲ್ಲಿ ಅವರು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿದ್ದರೆ ಶಿಕ್ಷೆಗೆ ಗುರಿ ಮಾಡಲು ಅವಕಾಶ ಇತ್ತು. ಕೃಷಿಕರಲ್ಲದವರು ಜಮೀನು ಖರೀದಿ ಮಾಡಬಾರು ಎಂದು ನಿಯಮ ಇದಾಗಿತ್ತು. ಒಬ್ಬ ವ್ಯಕ್ತಿ ಇಷ್ಟೇ ಪ್ರಮಾಣದ ಕೃಷಿ ಭೂಮಿ ಹೊಂದಿರಬೇಕು ಎಂಬುದನ್ನು ನಿಯಮದಲ್ಲಿ ಹೇಳಲಾಗಿತ್ತು.

40-45 ಸಾವಿರ ಕೋಟಿ ಮೌಲ್ಯ :
ಆದರೆ, ಈಗ ಈ ಎಲ್ಲ ಸೆಕ್ಷನ್‍ಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡಲಾಗಿದೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತರಲಾಗಿದೆ. ಜೊತೆಗೆ ಭೂಮಿ ಸಂಬಂಧ ಕೋರ್ಟ್‍ಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ವಿವಿಧ ಜಿಲ್ಲೆಗಳಲ್ಲಿ ಒಟ್ಟು 13 ಸಾವಿರ ಕೇಸುಗಳಿಗೆ ತಿಲಾಂಜಲಿ ಇಡಲಾಗಿದೆ. 40-45 ಸಾವಿರ ಕೋಟಿ ರೂ.ಮೌಲ್ಯದ ಜಮೀನುಗಳಿಗೆ ಸಂಬಂಧಿಸಿದ ಕೇಸುಗಳು ವಜಾ ಆಗಿದೆ.
ಬೆಂಗಳೂರು ನಗರದ ಸುತ್ತಮುತ್ತ ಮಧ್ಯವರ್ತಿಗಳ ಮೂಲಕ ಗೃಹ ನಿರ್ಮಾಣ ಸಹಕಾರ ಸಂಘಗಳು ಭೂಮಿ ಖರೀದಿಸಿವೆ. ಇದರ ಮೌಲ್ಯ ಹತ್ತು ಸಾವಿರ ಕೋಟಿಗೂ ಹೆಚ್ಚು. ಸರ್ಕಾರವೇ ನಡೆಸಿರುವ ಆಡಿಟ್‍ನಲ್ಲಿ ಈ ವಿಷಯ ಬಹಿರಂಗವಾಗಿದೆ.
ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಷಡ್ಯಂತ್ರ ಇದೆ. ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದರು, ಬಂಡವಾಳ ಹೂಡಿಕೆ ಆಗುತ್ತಿರಲಿಲ್ಲ, ಯಾರು ಬೇಕಾದರೂ ಜಮೀನು ಖರೀದಿಸಿ ಕೃಷಿ ಮಾಡಬಹುದು ಎಂಬ ಕಾರಣಗಳನ್ನು ನೀಡಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ. ನಮ್ಮ ಸರ್ಕಾರ ಇದ್ದಾಗ ಬಂಡವಾಳ ಬಂದಿರಲಿಲ್ಲವೇ ? ಹೂಡಿಕೆಯಲ್ಲಿ ಕರ್ನಾಟಕ ನಂಬರ್ ಒಂದು ಅಥವಾ ಎರಡನೇ ಸ್ಥಾನದಲ್ಲಿ ಇರಲಿಲ್ಲವೇ ? ಬೇರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲವೇ ? ಹಾಗಾದರೆ ಭ್ರಷ್ಟಾಚಾರ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ ? ಇದು ಕುಂಟು ನೆಪವಷ್ಟೆ.

436 ಎಕರೆಗೆ ಏರಿಕೆ :
ಕೇರಳದಲ್ಲಿ ಒಂದು ಕುಟುಂಬ 20, ತಮಿಳುನಾಡು, 30 ಆಂಧ್ರದಲ್ಲಿ 54 ಎಕರೆ ಭೂಮಿ ಹೊಂದಲು ಆದರೆ ಇಲ್ಲಿ ಒಂದು ಕುಟುಂಬ 432 ಎಕರೆ ಹೊಂದಲು ಅವಕಾಶ ಮಾಡಿಕೊಡಲಾಗಿದೆ. 432 ಎಕರೆ ಖರೀದಿ ಮಾಡುವವರು ಯಾರು ? ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ಉದ್ಯಮ ಮಾಡವವರು, ಕಾರ್ಪೊರೇಟ್ ಕಂಪನಿಗಳವರು ಮಾತ್ರ.
ಸೆಕ್ಷನ್ 63(2ಎ) ಪ್ರಕಾರ 20 ಯೂನಿಟ್ ವರೆಗೆ ಭೂಮಿ ಖರೀದಿಸುವ ಅವಕಾಶ ಇತ್ತು. ಈಗ 80 ಯೂನಿಟ್‍ಗೆ ಭೂಮಿ ಖರೀದಿ ಪ್ರಮಾಣಹೆಚ್ಚಿಸಲಾಗಿದೆ. ತರಿ, ಖುಷ್ಕಿ, ಬಾಗಾಯ್ತು ಜಮೀನುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. 87 ಲಕ್ಷ ರೈತ ಕುಟುಂಬಗಳು ರಾಜ್ಯದಲ್ಲಿವೆ. ಸರಾಸರಿ 3 ಎಕರೆ ಜಮೀನನ್ನು ಒಂದು ಕುಟುಂಬ ಹೊಂದಿರಬಹುದು. ನಾಲ್ಕು ಕೋಟಿ ರೈತರು ಇಲ್ಲಿ ಬೇಸಾಯ ನಡೆಸುತ್ತಿದ್ದಾರೆ.
ಇದೀಗ ಇಡೀ ರೈತ ಸಮುದಾಯವನ್ನು ಸರ್ಕಾರ ನಾಶ ಮಾಡಲು ಹೊರಟಿದೆ. ರೈತರು ಬೀದಿ ಪಾಲಾಗುವುದರ ಜೊತೆಗೆ ಕಾರ್ಪೊರೇಟ್ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಆಹಾರದ ಸ್ವಾವಲಂಬನೆ ಇದರಿಂದ ನಾಶವಾಗುತ್ತದೆ.
ಒಬ್ಬರಿಗೆ ಒಂದು ವೃತ್ತಿ ಎಂಬ ದೃಷ್ಟಿಕೋನದಲ್ಲಿ ಈ ಕಾಯಿದೆಯನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಈಗ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡುವುದಾದರೆ ಭೂ ಸುಧಾರಣೆ ಕಾಯಿದೆಯ ಮೂಲ ಉದ್ದೇಶವೇ ನಾಶವಾಗುತ್ತದೆ. ಗೇಣಿದಾರರಿಗೆ, ಬಡವರಿಗೆ ಸಿಗುತ್ತಿದ್ದ ರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ತೆಗೆದು ಹಾಕಿದೆ. ಖರೀದಿ ಮಾಡಿದ ಭೂಮಿಯನ್ನು ಕೃಷಿ ಉದ್ದೇಶಕ್ಕೇ ಬಳಸಬೇಕೆಂಬ ನಿಯಮವೇನಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮ ಆ ಜಮೀನುಗಳಲ್ಲಿ ತಲೆ ಎತ್ತುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಮರ್ಜಿಗೆ ಒಳಗಾಗಿ ಸರ್ಕಾರ ತಿದ್ದುಪಡಿ ತಂದಿದೆ.

ಕೇಂದ್ರ ಸರ್ಕಾರದ ಕುಮ್ಮಕ್ಕು :
ಸರ್ಕಾರದ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಕುಮ್ಮಕ್ಕು ಇದೆ. ಮೋದಿಯವರ ಸರ್ಕಾರಕ್ಕೆ ಬಡವರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿಯೇ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮೀಸಲು ಸೌಲಭ್ಯ ಒದಗಿಸಬೇಕು. ಖಾಸಗಿಯವರ ವಶಕ್ಕೆ ಕೈಗಾರಿಕೆಗಳನ್ನು ಕೊಟ್ಟರೆ ಮೀಸಲು ಸೌಲಭ್ಯವೇ ಇರುವಂತಿಲ್ಲ. ನೇರವಾಗಿ ಮೀಸಲು ಪದ್ಧತಿ ತೆಗೆದರೆ ಜನ ದಂಗೆ ಏಳುತ್ತಾರೆ ಎಂಬ ಕಾರಣಕ್ಕೆ ಹಿಂಬಾಗಿಲ ಮೂಲಕ ಕೈಗಾರಿಕೆಗಳನ್ನು ಮಾರಲು ಕೇಂದ್ರ ಮುಂದಾಗಿದೆ.
ಜಮೀನ್ದಾರಿ ಹಾಗೂ ಜಹಗೀರು ಪದ್ಧತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಕೃಷಿ ನಾಶವಾಗುವುದರ ಜೊತೆಗೆ ರೈತರು ನಿರ್ಗತಿಕರಾಗುವುದರ ಜೊತೆಗೆ ಆಹಾರದ ಸ್ವಾವಲಂಬನೆ ಸಂಪೂರ್ಣವಾಗಿ ಹೋಗುತ್ತದೆ.
ಸರ್ಕಾರಕ್ಕೆ ಸದುದ್ದೇಶ ಇದ್ದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ವಿವರಣೆ ನೀಡಬಹುದಿತ್ತು. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಯಿದೆಗೆ ತುರ್ತಾಗಿ ತಿದ್ದುಪಡಿ ತರುವ ಅಗತ್ಯವಾದರೂ ಏನಿತ್ತು. ಪ್ರಾಮಾಣಿಕರಾಗಿದ್ದರೆ ಅಧಿವೇಶನ ಕರೆದು ಚರ್ಚಿಸಬಹುದಿತ್ತು. ಲಾಕ್‍ಡೌನ್ ಇರುವುದರಿಂದ ರೈತ ಸಂಘಟನೆಗಳು ಪ್ರತಿಭಟನೆ ಮುಂದಾಗುವುದಿಲ್ಲ ಎಂದು ಭಾವಿಸಿ ಕಳ್ಳದಾರಿಯಲ್ಲಿ ತಿದ್ದುಪಡಿ ತರಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭೂ ಸುಧಾರಣೆ ವಿಷಯ ಇತ್ತು. ಭೂಮಿ ರಾಷ್ಟ್ರೀಕರಣವಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದರು. ವಿನೋಬಾ ಭಾವೆಯವರು ಭೂದಾನ ಚಳವಳಿ ನಡೆಸಿದ್ದರು.
ಆದರೆ, ರಾಜ್ಯ ಸರ್ಕಾರ ಶ್ರೀಮಂತರ ಕೈಗೇ ಭೂಮಿ ಕೊಡಲು ಹೊರಟಿದೆ. ಕಾರ್ಪೊರೇಟ್ ಕಂಪನಿಗಳು ಏಜೆಂಟ್, ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಪ್ರೀತಿ ಹೆಸರಲ್ಲಿ ವಂಚಿಸಿ ಜೈಲು ಸೇರಿದ, ಬೇಲ್ ಮೇಲೆ ಹೊರಬಂದು ಮಸಣದ ಪಾಲಾದ

ಹಾಸನ: ಪ್ರೀತಿ ಹೆಸರಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದ್ದ ಯುವಕನ ಆಟ ಕೊಲೆಯಲ್ಲಿ ಅಂತ್ಯವಾಗಿದೆ. ಅಪ್ತಾಪ್ತ ಬಾಲಕಿಯ ಚಿಕ್ಕಪ್ಪ ಪ್ರಿಯಕರನ್ನು ಗುಂಡಿಕ್ಕಿ ಕೊಂದ ಘಟನೆ ಆಲೂರು ತಾಲ್ಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು(28) ಕೊಲೆಯಾದ ವ್ಯಕ್ತಿ.

ಸೊಪ್ಪಿನಹಳ್ಳಿ ಗ್ರಾಮದ ಅಪ್ರಾಪ್ತೆ ಯುವತಿ ಹಾಗೂ
ಮಧು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ಸೋಗಿನಲ್ಲಿ ಕಳೆದ ವರ್ಷ ಅಪ್ರಾಪ್ತೆ ಮೇಲೆ‌ ಮಧು ಅತ್ಯಾಚಾರ ಎಸಗಿದ್ದ. ನಂತರ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ರೂ, ಮಧು ಅಪ್ರಾಪ್ತೆ ಮನೆ ಮುಂದೆ ಪದೇ ಪದೇ ಗಲಾಟೆ ಮಾಡಿ ಮದುವೆಗೆ ಒತ್ತಾಯಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಅಪ್ರಾಪ್ತೆ‌ ಚಿಕ್ಕಪ್ಪ ರೂಪೇಶ್ ಮಧುವನ್ನು ಗುಂಡಿಟ್ಟು ಕೊಂದಿದ್ದಾನೆ.

ಇಂದು ಬೆಳಗ್ಗೆ ಸಹ ಮನೆ ಮುಂದೆ ಬಂದು ಅಪ್ರಾಪ್ತೆಯನ್ನು ಚುಡಾಯಿಸುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನಿಂದ ಬಂದು ಹೋಂ ಕ್ವಾರೆಂಟೈನ್ ಆಗಿದ್ದ ಯುವತಿ ಚಿಕ್ಕಪ್ಪ ರೂಪೇಶ್ ಶೂಟ್ ಔಟ್ ನಂತರ ಪರಾರಿಯಾಗಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಇಂದು ದಾಖಲೆಯ 3175 ಕರೋನಾ ಕೇಸ್: 47253 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ.

ಬೆಂಗಳೂರು: ರಾಜ್ಯದಲ್ಲಿ ದಾಖಲೆಯ 3175 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ,87 ಸೋಂಕಿತರು ಒಂದೇ ದಿನ ಮೃತರಾಗುವ ಮೂಲಕ ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸಧ್ಯ 27853 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 47253ಕ್ಕೆ ತಲುಪಿದೆ.928 ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 597 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು‌1076 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 18466 ಆಗಿದೆ.

ಜಿಲ್ಲಾವಾರು ಕೋವಿಡ್ ವಿವರ: