ಬೆಂಗಳೂರು: ಬಿಸಿನೆಸ್ ಕಟ್ಟಬೇಕು , ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಕೋರ್ಸ್ ಗಳನ್ನು ಎಫ್ ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಿಗಳಾಗಬೇಕು ಎನ್ನುವವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ‘ಬಿಸಿನೆಸ್ ಕಟ್ಟುವುದು ಹೇಗೆ?’ ಎನ್ನುವ ಕೋರ್ಸ್ ಉಪಯುಕ್ತವಾಗಿದೆ. ಅದರಲ್ಲೂ ಕನ್ನಡದಲ್ಲೇ ಈ ಕೋರ್ಸ್ ಆರಂಭಿಸಿರುವುದು ಮೆಚ್ಚುಗೆಪಡುವಂತಹ ವಿಚಾರ ಎಂದರು.
ಬೆಂಗಳೂರು ಸ್ಟಾರ್ಟ್ ಅಪ್ ಉದ್ದಿಮೆಗಳ ರಾಜಧಾನಿಯಾಗಿದೆ. ನವೋದ್ಯಮಗಳಿಗೆ ಬೇಕಿರುವ ಕೌಶಲಗಳಿಗೆ ತರಬೇತಿ ನೀಡುವ ಸಲುವಾಗಿ ಸರ್ಕಾರದ ಸಹಯೋಗದೊಂದಿಗೆ ಎಫ್ ಕೆಸಿಸಿಐ ಒಂದು ವಿಶೇಷ ತರಬೇತಿ ಕೇಂದ್ರ ಆರಂಭಿಸಲಿದೆ. ಈ ಹೊಸ ಕೇಂದ್ರದ ನಿರ್ಮಾಣದಿಂದ ಹೆಚ್ಚು ವೃತ್ತಿಪರರನ್ನು ಸೃಷ್ಟಿಸಿ ಉದ್ದಿಮೆಗಳನ್ನು ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂ ನ ಸಿಇಒ ಸಿ ಎಸ್ ಸುಧೀರ್, ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ಬಿಸಿನೆಸ್ ಕಟ್ಟುವುದು ಹೇಗೆ? ಎನ್ನುವ ಕೋರ್ಸ್ ಸ್ವಂತ ಉದ್ದಿಮೆ ಆರಂಭಿಸಬೇಕು, ಕಟ್ಟಿರುವ ಉದ್ದಿಮೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು, ಬೆಳೆಸಿರುವ ಉದ್ಯಮವನ್ನು ವಿಸ್ತರಿಸಬೇಕು ಎಂದುಕೊಂಡಿರುವವರಿಗೆ ಅನುಕೂಲವಾಗಲಿದೆ. ಹೆಚ್ಚು ಜನರಿಗೆ ಈ ವಿಚಾರ ತಲುಪಬೇಕು ಎನ್ನುವ ಉದ್ದೇಶದಿಂದ ಕನ್ನಡದಲ್ಲೇ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಮತ್ತಷ್ಟು ಕೋರ್ಸ್ ಗಳನ್ನು ರೂಪಿಸಲಾಗುತ್ತದೆ ಎಂದು ವಿವರಿಸಿದರು.









