ತುಮಕೂರು: ರಾಮನಗರದಲ್ಲಿ ಬಂಧಿತನಾದ ಉಗ್ರನಿಗೂ ತುಮಕೂರಿಗೂ ನಂಟಿದೆ. ತುಮಕೂರಿನಲ್ಲೂ ಅವನ ಸಹಚರರಿದ್ದಾರೆ. ಆದರೆ, ಸರ್ಕಾರ ಅದನ್ನ ಬಹಿರಂಗಪಡಿಸದೇ ಇರೋದು ದುರಾದೃಷ್ಟಕರ ಎನ್ನುವ ಮೂಲಕ ಮಾಜಿ ಸಚಿವ ಸೊಗಡು ಶಿವಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ಎರಡು ವರ್ಷದ ಹಿಂದೆ ತುಮಕೂರಿನಲ್ಲಿ ಬಂಧಿತನಾಗಿದ್ದ ಸೈಯದ್ ಮುಜಾಹಿದ್ಗೂ ರಾಮನಗರದ ಉಗ್ರನಿಗೂ ನಂಟಿತ್ತು. ತುಮಕೂರಿನಲ್ಲಿ ಹೊರ ರಾಜ್ಯದಿಂದ ಬಂದು ಅನುಮಾನಸ್ಪದವಾಗಿ ಓಡಾಡುತ್ತಿದ್ದಾರೆ. ಅವರ ಮೇಲೆ ಪೊಲೀಸರು ನಿಗಾ ಇಡುತ್ತಿಲ್ಲ ಎಂದು ಹೇಳಿದರು.
ಸರ್ಕಾರ ವೋಟ್ ಬ್ಯಾಂಕಿಗೋಸ್ಕರ ಉಗ್ರರಿರುವುದನ್ನು ಬಹಿರಂಗಪಡಿಸುತ್ತಿಲ್ಲ. ಸರ್ಕಾರಕ್ಕೆ ಜನರ ಸಂತತಿ, ದೇಶ, ಸಮಾಜಕ್ಕಿಂತ ಅಧಿಕಾರ ಮುಖ್ಯ. ತುಮಕೂರಿನಲ್ಲಿ ಡ್ರಗ್ ಮಾಫಿಯಾ ಮಿತಿಮೀರಿದೆ. ಡ್ರಗ್ ಮಾಫಿಯಾದಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ದಂದೆಕೋರರ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಅರೋಪಿಸಿದರು.









