ಬೆಂಗಳೂರು:ರಾಜ್ಯದಲ್ಲಿ ಶಾಲಾರಂಭದ ಕುರಿತಂತೆ ರಾಜ್ಯ ಸರ್ಕಾರವು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಪೇಕ್ಷೆಯಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಶಾಲೆಗಳನ್ನು ತೆರೆಯುತ್ತೇವೆಂದು ಸರ್ಕಾರವು ಅಭಿಪ್ರಾಯ ವ್ಯಕ್ತ ಪಡಿಸಿದೆಯೆಂದು ವರದಿಯಾಗಿರುವುದು ಸರ್ಕಾರದ ನಿರ್ಣಯವಾಗಿರುವುದಿಲ್ಲ. ನಮ್ಮ ಅಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಿದಾಗ ವ್ಯಕ್ತಪಡಿಸಿರಬಹುದಾದ ಸಾಮಾನ್ಯ ಅಭಿಪ್ರಾಯವನ್ನು ಈ ರೀತಿ ಪ್ರತಿಬಿಂಬಿಸಲಾಗಿದೆಯಷ್ಟೆ ಎಂದು ಸಚಿವ ಎಸ್.ಸುರೇಶ್ಕುಮಾರ್ ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬೇರೆಯಿದ್ದು, ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ಬೇರಾವ ಅನವಶ್ಯಕ ಆತಂಕ ಬೇಡ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.









